ಕುಂದಾಪುರ: ಕೆದೂರು ಗ್ರಾ.ಪಂ. ನಲ್ಲಿ ಅಧಿಕಾರಿಗಳಿಂದ ಸಮರ್ಪಕ ಕೆಲಸವಾಗುತ್ತಿಲ್ಲ. ಅಧಿಕಾರಿಗಳ ಕರ್ತವ್ಯಲೋಪದ ಬಗ್ಗೆ ಅಸಾಮಾಧನ ವ್ಯಕ್ತಪಡಿಸಿ ಹಾಗೂ ಪಿಡಿಓ ಬದಲಾವಣೆಗೆ ಆಗ್ರಹಿಸಿ ಕೆದೂರು ಗ್ರಾ.ಪಂ. ಜನಪ್ರತಿನಿಧಿಗಳು ಹಾಗೂ ನಾಗರಿಕರು ಕುಂದಾಪುರದ ತಾ.ಪಂ. ಎದುರು ಬುಧವಾರ ಧರಣಿ ನಡೆಸಿದರು.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಕೆದೂರಿನಲ್ಲಿ ನಡೆದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ” ಕಾರ್ಯಕ್ರಮದಲ್ಲಿ ನೀಡಲಾದ ಮನವಿ, ಕೋರಿಕೆ, ಸಮಸ್ಯೆಗಳಿಗೆ ಒಂದಷ್ಟೂ ಗಮನ ನೀಡದ ಸರ್ಕಾರದ ಅಧಿಕಾರಿಗಳ ಬಗ್ಗೆ ನಂಬಿಕೆಯಿಲ್ಲ ಎಂದು ದೂರಿದರು.
ಈ ಬಗ್ಗೆ ಮಾತನಾಡಿದ ನಿವೃತ್ತ ಶಿಕ್ಷಣಾಧಿಕಾರಿ ಕೆ. ಸೀತಾರಾಮ ಶೆಟ್ಟಿ, ಪ್ರಜಾಪ್ರಭುತ್ವದ ಬುನಾದಿ ಗ್ರಾ.ಪಂ. ಇಲ್ಲಿನ ಆಡಳಿತ ಹದಗೆಟ್ಟರೆ ನ್ಯಾಯ, ಕಾನೂನು ಹಾಗೂ ಸಾಮಾಜಿಕ ಭದ್ರತೆ ಮುರಿದು ಬಿದ್ದರೆ, ಜನ ಯಾವ ಸರ್ಕಾರ, ಆಡಳಿತ, ಕಾನೂನನ್ನು ನಂಬುವುದಿಲ್ಲ ಎಂದರು.
ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಅವರಿಗೆ ಇದೇ ವೇಳೆ ಮನವಿ ಸಲ್ಲಿಸಲಾಯಿತು. ಎ. 15ರೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ಬಳಿಕ ಪ್ರತಿಭಟನೆ ನಿಲ್ಲಿಸಲಾಯಿತು.
ಈ ಸಂದರ್ಭ ಕೆದೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ, ಉಪಾಧ್ಯಕ್ಷೆ ಮಾಲತಿ, ಸದಸ್ಯರಾದ ಭುಜಂಗ ಶೆಟ್ಟಿ, ಸತೀಶ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಗುಬ್ಬಿ, ಜಲಜಾ, ವಿಜಯ ಶೆಟ್ಟಿ, ಉಲ್ಲಾಸ್ ಹೆಗ್ಡೆ, ಜ್ಯೋತಿ, ಸ್ಥಳೀಯರಾದ ಧರ್ಮರಾಜ್ ಮೊದಲಿಯಾರ್, ಶಾರದಾ, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.