ಮಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಟ್ವೀಟ್ ಮಾಡುವುದು ಅವರ ವೈಯಕ್ತಿಕ ವಿಚಾರ, ಅವರಿಗೆ ಸಂಬಂಧಿಸಿದ ವಿಚಾರಕ್ಕೆ ಅವರು ಟ್ವೀಟ್ ಮಾಡುತ್ತಾರೆ. ಅದನ್ನು ಸಂಘಟನೆ ಜೊತೆ ಸಂಪರ್ಕ ಕಲ್ಪಿಸುವುದು ಸರಿಯಲ್ಲ ಎಂದು ಸಿ.ಎಫ್.ಐ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಹೇಳಿದರು.
ಹಿಜಾಬ್ ವಿವಾದಕ್ಕೆ ನವೆಂಬರ್ ತಿಂಗಳಲ್ಲೇ ಮಾಸ್ಟರ್ ಪ್ಲಾನ್ ನಡೆದಿತ್ತು ಎಂಬ ವಿಚಾರವಾಗಿ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಿ.ಎಫ್.ಐ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ವಿದ್ಯಾರ್ಥಿಗಳಿಗೆ ಅವರ ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ. ವಿದ್ಯಾರ್ಥಿಗಳು ಮಾಡಿರುವ ಟ್ವೀಟ್ ವಿಚಾರವನ್ನು ಸಂಘಟನೆಯ ಜೊತೆ ತಳುಕು ಹಾಕುವುದು ಸರಿಯಲ್ಲ, ಇದೊಂದು ನಿರಾಧಾರ ಆರೋಪ ಎಂದರು.
ಕ್ಯಾಂಪಸ್ ಫ್ರಂಟ್ ಈ ವಿಚಾರವಾಗಿ ಹೋರಾಟ ಮಾಡುತ್ತಿರುವುದು ಹೌದು, ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಅವರ ಜೊತೆ ನಿಂತಿದ್ದೇವೆ. ತೀರ್ಪು ನಮ್ಮ ಪರವಾಗಿ ಬಂದ್ರೆ ಸ್ವಾಗತಿಸುತ್ತೇವೆ, ವಿರುದ್ಧವಾಗಿ ಬಂದ್ರೆ ಕಾನೂನಾತ್ಮಕ ನೆಲೆಗಟ್ಟಿನಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದರು.