ಮೂಡುಬಿದಿರೆ: ನಂಬಿಕೆ, ವಿಶ್ವಾಸದಿಂದ ನಡೆದುಕೊಂಡರೆ ಎಲ್ಲಾ ಕಾರ್ಯದಲ್ಲೂ ಖಂಡಿತ ಯಶಸ್ವನ್ನು ಕಾಣಲು ಸಾಧ್ಯ ಎಂದು ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ತಿಳಿಸಿದರು.
ಶ್ರೀ ಕ್ಷೇತ್ರ ಇರುವೈಲು ಇದರ ವರ್ಷಾವಧಿ ಮಹೋತ್ಸವ ಹಾಗೂ ರಥೋತ್ಸವದ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಯಿಯಾದವಳು ಮಕ್ಕಳಿಗೆ ಕೆಟ್ಟದ್ದನ್ನು ಬಯಸುವುದಿಲ್ಲ, ಅವಳು ಸದಾ ತನ್ನ ಶಿಶುವಿಗೆ ಸನ್ಮಾರ್ಗದಲ್ಲಿ ನಡೆಯುವ ದಾರಿಯನ್ನು ತೋರುತ್ತಾಳೆ. ಹೆತ್ತ ತಂದೆ-ತಾಯಿಗಿಂತ ದೊಡ್ಡ ದೇವರಿಲ್ಲ ಎಂದರು.
ರಾಜ್ಯ ಹಿಂದೂ ಧಾರ್ಮಿಕ ಪರಿಷತ್ನ ಸದಸ್ಯ ಕಶೆಕೋಡಿ ಸೂರ್ಯ ನಾರಾಯಣ ಭಟ್ ಮಾತಾನಾಡಿ ದೇವಿಯ ಸನ್ನಿಧಿಗೆ ಬರುವಾಗ ಯಾರನ್ನೂ ಸಹ ಯಾವ ಜಾತಿ, ಯಾವ ಧರ್ಮದವ ಎಂದು ಕೇಳಬೇಡಿ. ಗೌರವ ನಾವು ಕೇಳಿ ಪಡೆಯುವಂತದಲ್ಲ. ನಾವು ಇರುವ ರೀತಿಯನ್ನು ನೋಡಿ ಗೌರವ ಕೊಡುವಂತೆ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪಂ. ಅಧ್ಯಕ್ಷ ವಲೇರಿಯನ್ ಕುಟಿನ್ಹ್ , ಜಿಲ್ಲಾ ಹಿಂದೂ ಧಾರ್ಮಿಕ ಪರಿಷತ್ ಸದಸ್ಯರಾದ ದೇವೆಂದ್ರ ಹೆಗ್ಡೆ ಮತ್ತು ಭುವನಾಭಿರಾಮ ಉಡುಪ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಐ.ಕುಮಾರ್ ಶೆಟ್ಟಿ, ಮೂಡುಬಿದಿರೆ ಕುಮಾರ್ ಎಲೆಕ್ಟ್ರಿಕಲ್ಸ್ ಮಾಲಕ ಹಾಗೂ ಪಂ. ಮಾಜಿ ಸದಸ್ಯ ಕುಮಾರ್ ಪೂಜಾರಿ ಉಪಸ್ಥಿತರಿದ್ದರು.
ಈ ವೇಳೆ ಕ್ಷೇತ್ರದಲ್ಲಿ ನಡೆಯುವ ವರ್ಷಾವಧಿ ಕಾರ್ಯಕ್ರಮಗಳ ಕ್ಯಾಲೆಂಡರ್ನ್ನು ಅತಿಥಿಗಳು ಬಿಡುಗಡೆ ಮಾಡಿದರು. ಕಾರ್ಯಕ್ರಮವನ್ನು ದಿನೇಶ್ ಪೂಜಾರಿ ನಿರೂಪಿಸಿ , ಸತೀಶ್ ಪೂಜಾರಿ ಸ್ವಾಗತಿಸಿ, ಪ್ರಕಾಶ್ ಪೆಜತ್ತಾಯ ವಂದಿಸಿದರು.