ಕಾರ್ಕಳ: ಸಾಣೂರು ಗ್ರಾಮದ ಮುರತ್ತಂಗಡಿ ಸಮೀಪದ ಆದರ್ಶ್ ಇಂಡಸ್ಟ್ರಿಯಲ್ ಕಂಪನಿಯಿಂದ ಗ್ರಾಮದ ಜನರ ಆರೋಗ್ಯಕ್ಕೆ ತೊಂದರೆಯಾಗುತ್ತಿರುವ ಕಾರಣ ಕಂಪನಿಯನ್ನು ವಸತಿ ರಹಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಗ್ರಾಮದ ಜನರು ಫೆ. 14 ರಂದು ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನೆಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ನ್ಯಾಯವಾದಿ ಬೆಲ್ಮನ್ ಪಂಚಾಯತ್ ಸದಸ್ಯೆ ಸಹನಾ ಕುಂದರ್, ಆದರ್ಶ್ ಇಂಡಸ್ಟ್ರಿಯಿಂದ ಪರಿಸರ ಹಾನಿಯಾಗುತ್ತಿದೆ. ಪರಿಸರಕ್ಕೆ ಮಾರಕವಾಗುವಂತ ಕಂಪನಿಗಳಿಗೆ ಬೆಂಬಲಿಸಬಾರದು ಮುಂದಿನ ಎಲ್ಲಾ ಹೋರಾಟಗಳಲ್ಲಿಯೂ ನಾವಿದ್ದೇವೆ ಎಂದು ಸಹನಾ ಕುಂದರ್ ಹೇಳಿದರು.
ಕಂಪನಿಯಿಂದ ಹೊರಬರುವ ವಿಷಯುಕ್ತ ಅನಿಲಗಳಿಂದ ಆರೋಗ್ಯ ಸಮಸ್ಯೆ ಸ್ಥಳೀಯ ಭಾಗಗಳಲ್ಲಿ ಹೆಚ್ಚಾಗಿದ್ದು ಕ್ಯಾನ್ಸರ್, ಅಸ್ತಮಾದಂತ ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಹಾಗಾಗಿ ಜನವಸತಿ, ಶಾಲೆ, ಅಂಗಡಿ ಸಮೀಪ ಈ ಕಾರ್ಖಾನೆ ಇರುವುದು ಒಳಿತಲ್ಲ. ಆದಷ್ಟು ಬೇಗ ಘೋರ ದುರ್ಗಟನೆ ನಡೆಯುವ ಮುಂಚೆ ಕಂಪನಿಯನ್ನು ಸ್ಥಳಾಂತರಿಸುವಂತೆ ಮನವಿ ಮಾಡುತ್ತೇವೆ ಎಂದು ಪಂ. ಸದಸ್ಯ ಕರುಣಾಕರ ಕೋಟ್ಯಾನ್ ಭರವಸೆ ನೀಡಿದರು.
ಜಿ.ಪಂ. ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಉದಯ ಎಸ್ ಕೋಟ್ಯಾನ್, ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಪೂಜಾರಿ, ಸದ್ಯರುಗಳಾದ ಯುವರಾಜ್ ಜೈನ್, ಸರಸ್ವತಿ, ಪ್ರಮೀಳಾ, ಸುನಂದಾ, ತಾ.ಪಂ. ಮಾಜಿ ಸದಸ್ಯ ಪ್ರವೀಣ್ ಕೋಟ್ಯಾನ್, ಎಪಿಎಂಸಿ ನಾಮ ನಿರ್ದೇಶಿತ ಸದಸ್ಯ ದೇವಾನಂದ್ ಶೆಟ್ಟಿ, ಸಾಣೂರು ಯುವಕ ಮಂಡಲ ಸದಸ್ಯರು, ಗ್ರಾ.ಪಂ. ಸದಸ್ಯ ಕರುಣಾಕರ ಎಸ್ ಕೋಟ್ಯಾನ್, ಕೆಎಂಸಿ ನಿರ್ದೇಶಕ ಸಾಣೂರು ನರಸಿಂಹ ಕಾಮತ್, ಸಾಮಾಜಿಕ ಹೋರಾಟಗಾರ ರಾಮ್ ಪ್ರಕಾಶ್ ಶೆಟ್ಟಿ, ಪ್ರಕಾಶ್ ರಾವ್, ರಘುರಾಮ್ ಶೆಟ್ಟಿ, ಶಾಂತರಾಮ್ ಶೆಟ್ಟಿ ನೇತೃತ್ವ ವಹಿಸಿದರು. ಮುರತಂಗಡಿ ಬಾಲಾಂಜನೇಯ ಸಂಘದ ಸದಸ್ಯರು, ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಘದ ಸದಸ್ಯರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಎರಡು ವರ್ಷಗಳ ಹಿಂದೆ ಜಿಲ್ಲಾಡಳಿತವು ಈ ಪ್ಯಾಕ್ಟರಿ ವಿಸ್ತರಣೆ ಬಗ್ಗೆ ಸಭೆ ಆಯೋಜಿಸಿತ್ತು ಆ ಸಭೆಯಲ್ಲಿ ಸಾರ್ವಜನಿಕರು ಪ್ಯಾಕ್ಟರಿ ಆರಂಭ ಮಾಡದಂತೆ ಒತ್ತಾಯಿಸಿದ್ದರು. ಆದರೆ ಇವೆಲ್ಲದರ ನಡುವೆಯೂ ಪ್ಯಾಕ್ಟರಿ ಆರಂಭಗೊಂಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.