ಮುನಿಯಾಲು: ಹೆಬ್ರಿ ತಾಲ್ಲೂಕು ವರಂಗ ಗ್ರಾ.ಪಂ.ಯಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿಯ ‘ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ’ ಯೋಜನೆಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಶನಿವಾರ ಚಾಲನೆ ನೀಡಿದರು.
ರೈತರಿಗೆ ಪಹಣಿ, ಜಮೀನಿನ ನಕ್ಷೆ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ರೈತರಿಗೆ ಪಹಣಿ, ಜಮೀನಿನ ನಕ್ಷೆ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಜಾರಿಗೆ ಬಂದಿದ್ದರೆ ಅದು ನಮ್ಮ ಸರ್ಕಾರದಿಂದ. ಇದು ಕರ್ನಾಟಕದ ಇತಿಹಾಸದಲ್ಲೇ ಮೊದಲ ಕಾರ್ಯಕ್ರಮ. ರೈತರು ಸಹಿತ ಎಲ್ಲರಿಗೂ ಮುಂದಿನ ಒಂದೆರಡು ತಿಂಗಳಲ್ಲಿ ಪ್ರತಿ ಮನೆಗೂ ದಾಖಲೆಗಳು ತಲುಪಲಿದೆ. ಇದರಿಂದ ಜನತೆ ಜಮೀನುಗಳ ದಾಖಲೆಗಳಿಗಾಗಿ ತಾಲ್ಲೂಕು ಕಚೇರಿಗೆ ಅಲೆದಾಡುವುದು ತಪ್ಪುತ್ತದೆ ಎಂದರು.
ಈ ಸಂದರ್ಭ ಹೆಬ್ರಿ ತಹಶೀಲ್ಧಾರ್ ಪುರಂದರ್ ಕೆ, ವರಂಗ ಗ್ರಾ.ಪಂ. ಅಧ್ಯಕ್ಷೆ ಉಷಾ ಹೆಬ್ಬಾರ್, ಜಿ.ಪಂ. ಮಾಜಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ಕಂದಾಯ ನಿರೀಕ್ಷಕ ಹಿತೇಶ್ ಯುಬಿ, ಗ್ರಾಮ ಲೆಕ್ಕಾಧಿಕಾರಿ ರಾಚಪ್ಪಾಜಿ, ಜನಪ್ರತಿನಿಧಿಗಳು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.