ಬೆಂಗಳೂರು: ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ಹೆಸರಾಂತ ನಟಿ ಭಾರ್ಗವಿ ನಾರಾಯಣ್ ವಯೋಸಹಜ ಖಾಯಿಲೆಯಿಂದ ಇಂದು ಸಂಜೆ 7.30 ರ ಸುಮಾರಿಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ.
ಎರಡು ಕನಸು, ಬಾ ನಲ್ಲೆ ಮದುಚಂದ್ರಕ್ಕೆ, ಪಲ್ಲವಿ ಅನುಪಲ್ಲವಿ, ಸೇರಿದಂತೆ 22 ಚಿತ್ರಗಳಲ್ಲಿ ನಟಿಸಿದ್ದ ಭಾರ್ಗವಿಯವರು ನಟನೆ ನಾಟಕ ರಚನೆ ಹಾಗೂ ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಇವರ ಮಕ್ಕಳಾದ ಪ್ರಕಾಶ್ ಬೆಳವಾಡಿ ಹಾಗೂ ಸುಧಾ ಬೆಳವಾಡಿ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಕೊಡುವ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ರಾಜ್ಯ ಅಕಾಡೆಮಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಿರಿಯ ನಟಿ ಭಾರ್ಗವಿ ನಾರಾಯಣ್ ರವರ ಸಾವಿಗೆ ಚಿತ್ರರಂಗ ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.