ನವದೆಹಲಿ: ಸೋಮವಾರದಂದು ಅರುಣಾಚಲ ಪ್ರದೇಶದ ಕೆಮರ್ ಸೆಕ್ಟರ್ ನಲ್ಲಿ ಹಿಮಪಾತ ಸಂಭವಿಸಿದ್ದು, ಅದರಲ್ಲಿ ಏಳು ಜನ ಭಾರತೀಯ ಯೋಧರು ಸಿಲುಕಿದ್ದಾರೆ. ಹಿಮದಲ್ಲಿ ಸಿಲುಕಿದ ಯೋಧರನ್ನು ಹುಡುಕುವ ಕಾರ್ಯ ಭರದಿಂದ ಸಾಗುತ್ತಿದ್ದು, ಇದುವರೆಗೂ ಹಿಮದೊಳಗೆ ಸಿಲುಕಿರುವ ಯೋಧರು ಪತ್ತೆಯಾಗಿಲ್ಲ.
ಕೆಮರ್ ಸೆಕ್ಟರ್ ನಲ್ಲಿ ಕೆಲವು ದಿನಗಳಿಂದ ಪ್ರತಿಕೂಲ ಹವಾಮಾನವಿದ್ದು ಇದರ ಮಧ್ಯೆಯೇ ಯೋಧರ ತಂಡವು ಪಹರೆಯಲ್ಲಿ ನಿರತವಾಗಿತ್ತು. ಹಿಮದಲ್ಲಿ ಸಿಲುಕಿರುವ ಯೋಧರು ಹಲವಾರು ಅಡಿಗಳಷ್ಟು ಆಳದಲ್ಲಿ ಸಿಲುಕಿರಬಹುದು, ಅವರನ್ನು ಪತ್ತೆಹಚ್ಚುವ ಕಾರ್ಯಚರಣೆ ನಡೆಯುತ್ತಿದೆ. ಹಿಮದಲ್ಲಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯಚರಣೆಯಲ್ಲಿ ನಿಷ್ಣಾತರಾದವರನ್ನು ಕರೆಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.