ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ರಾಜೇಶ್ ಅವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ನಟ ರಾಜೇಶ್ ಅವರು ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೇ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
‘ಕಲಾತಪಸ್ವಿ’ ಎಂದೇ ಪ್ರಸಿದ್ಧರಾಗಿದ್ದ ರಾಜೇಶ್ ಅವರ ನಿಜವಾದ ಹೆಸರು ಮುನಿ ಚೌಡಪ್ಪ. ರಂಗಭೂಮಿಯಲ್ಲಿ ವಿದ್ಯಾಸಾಗರ ಎಂಬ ಹೆಸರಿನಿಂದ ಗುರುತಿಸಿಕೊಂಡ ಅವರು, ತಮ್ಮ ಮೊದಲ ಚಿತ್ರ ‘ವೀರ ಸಂಕಲ್ಪ’ದ ನಂತರ ಚಿತ್ರರಂಗದಲ್ಲಿ ರಾಜೇಶ್ ಎಂದೇ ಪ್ರಸಿದ್ಧರಾದರು. ಸೊಸೆ ತಂದ ಸೌಭಾಗ್ಯ, ಬಿಡುಗಡೆ, ಕ್ರಾಂತಿವೀರ, ವಿಷಕನ್ಯೆ, ದೇವರ ದುಡ್ಡು, ಕಲಿಯುಗ, ವಸಂತನಿಲಯ ಹೀಗೆ ಮುಂತಾದ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.