ಕುಂದಾಪುರ: ರಾಜ್ಯ ಸರ್ಕಾರ ಶಾಲಾ-ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯ ಎಂಬ ಆದೇಶ ಹೊರಡಿಸಿದ ಬಳಿಕವೂ ಉಡುಪಿಯಲ್ಲಿ ಹಿಜಾಬ್ ವಿವಾದ ಮುಂದುವರಿದಿದೆ. ಕುಂದಾಪುರ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿಯರು ಫೆಬ್ರವರಿ 7 ರಂದು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಈ ವೇಳೆ ಪ್ರಾಂಶುಪಾಲರು ವಿದ್ಯಾರ್ಥಿನಿಯರ ಮನವೊಲಿಸಲು ಪ್ರಯತ್ನಿಸಿದರೂ ಅವರು ಒಪ್ಪದ ಕಾರಣ ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಯಿತು.
ಕಳೆದ ನಾಲ್ಕೈದು ದಿನಗಳಿಂದ ಹಿಜಾಬ್ ಧರಿಸಿದವರನ್ನು ಗೇಟ್ ಹೊರಗೆ ಕೂರಿಸಲಾಗುತ್ತಿತ್ತು. ಸರ್ಕಾರದ ಆದೇಶದ ಬಳಿಕವೂ ಕೂಡ ಹಿಜಾಬ್ ಧರಿಸಿ, ಹಿಜಾಬ್ ನಮ್ಮ ಹಕ್ಕು ಎಂದು ಹೇಳಿಕೆ ನೀಡುತ್ತಿದ್ದ ವಿದ್ಯಾರ್ಥಿನಿಯರಿಗೆ ಸರ್ಕಾರದ ಆದೇಶವನ್ನು ಮನದಟ್ಟು ಮಾಡಲು ಪ್ರಯತ್ನಿಸಿದರೂ ಅವರು ಒಪ್ಪಲಿಲ್ಲ. ಹೀಗಾಗಿ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಲಾಯಿತು. ವಿದ್ಯಾರ್ಥಿನಿಯರ ಆಗಮನಕ್ಕೂ ಮೊದಲು ಕಾಲೇಜು ಆವರಣ ಗೋಡೆಗೆ ಸರ್ಕಾರದ ಆದೇಶ ಪ್ರತಿಯನ್ನು ಅಂಟಿಸಲಾಗಿತ್ತು.