Sunday, June 8, 2025

ಅನ್ಯಾಯ ಪ್ರತಿಭಟಿಸುವುದರೊಂದಿಗೆ ಸಮಾಜಘಾತುಕ ಶಕ್ತಿ ಗುರುತಿಸಬೇಕು: ಸುಬ್ರಮಣ್ಯ ಹೊಳ್ಳ

ಕುಂದಾಪುರ: ಈ ದೇಶದ ನಿರ್ಮಾಣದ ಹಿಂದೆ ಲಕ್ಷಾಂತರ ಹಿರಿಯರ ತ್ಯಾಗ ಹಾಗೂ ಬಲಿದಾನಗಳಿವೆ. ಪ್ರಪಂಚದ ಹಲವು ರಾಷ್ಟ್ರಗಳು ಪರಕೀಯರ ಆಕ್ರಮಣದಿಂದ ಮೂಲ ಸ್ವರೂಪದಲ್ಲಿ ಬದಲಾವಣೆ ಕಂಡಿದೆ. ಭಾರತ ಮಾತ್ರವೇ ಮೂಲ ಸತ್ವವನ್ನು ಉಳಿಸಿಕೊಂಡು ಬಂದಿದೆ. ಅನ್ಯಾಯಗಳನ್ನು ಪ್ರತಿಭಟಿಸುವ ಜೊತೆಗೆ ನಮ್ಮ ನಡುವೆ ಇರುವ ಸಮಾಜಘಾತುಕ ಶಕ್ತಿಗಳನ್ನು ಗುರುತಿಸುವ ಕೆಲಸವನ್ನು ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಸುಬ್ರಮಣ್ಯ ಹೊಳ್ಳ ಹೇಳಿದರು.

ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ತಾಲ್ಲೂಕು ವಿ.ಹಿಂ.ಪ. ಹಾಗೂ ಬಜರಂಗದಳ ವತಿಯಿಂದ ಶಿವಮೊಗ್ಗದ ಬಜರಂಗದಳ ಸಂಘಟನೆಯ ಕಾರ್ಯಕರ್ತ ಹರ್ಷ ಅವರ ಅಮಾನುಷ ಹತ್ಯೆಯನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಸುಖ – ಸಂತೋಷದಿಂದ ಅಥವಾ ಅಸಹಾಕಾರದಿಂದ ಈ ದೇಶ ನಿರ್ಮಾಣವಾಗಿಲ್ಲ. ಸಾವಿರಾರು ವರ್ಷಗಳಿಂದ ಪರಕೀಯರ ಆಕ್ರಮಣವನ್ನು ಎದುರಿಸಿ ರಾಷ್ಟ್ರಪರ ಚಿಂತನೆಯನ್ನು ಉಳಿಸಿಕೊಳ್ಳುವ ಮನಸ್ಥಿತಿಯನ್ನು ನಮ್ಮ ಹಿರಿಯರು ನಮಗೆ ಕಲಿಸಿದ್ದಾರೆ. ಲವ್‌ ಜಿಹಾದ್ ಹಾಗೂ ಇತರ ಅನೇಕ ತಂತ್ರಗಳಿಂದ ನಮ್ಮ ಹೆಣ್ಣು ಮಕ್ಕಳ ಮನಸ್ಸನ್ನು ಕೆಡಿಸುವ ಪ್ರಯತ್ನಗಳು ನಡೆಯುತ್ತಲೇ ಇದೆ. ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕೆಲವು ಶಕ್ತಿಗಳು ತಮ್ಮ ಕೃತ್ಯವನ್ನು ಹೆಚ್ಚಿಸಿಕೊಳ್ಳುತ್ತಿವೆ. ನ್ಯಾಯಾಲಯಕ್ಕೆ ಹೋದವರೆ ನ್ಯಾಯಾಲಯದ ತೀರ್ಮಾನವನ್ನು ಒಪ್ಪದೆ ಇರುವ ಮನಸ್ಥಿತಿಗಳನ್ನು ಪ್ರದರ್ಶಿಸುತ್ತಿದ್ದಾರೆ, ಇದು ಸರಿಯಲ್ಲ ಎಂದರು.

ಬಜರಂಗದಳ ಜಿಲ್ಲಾ ಸಂಚಾಲಕ ಸುರೇಂದ್ರ ಮಾರ್ಕೋಡು ಮಾತನಾಡಿ, ಮೊದಲಿಗೆ ಹಿಂದೂ ಯುವಕರನ್ನು ಕೆರಳಿಸಿ ಅದಾದ ಬಳಿಕ ಅವರನ್ನು ವ್ಯವಸ್ಥಿತವಾಗಿ ಹತ್ಯೆ ಮಾಡುವುದು ಹಿಜಾಬ್ ವಿವಾದ‌ ಸೃಷ್ಟಿಸಿದ ಉದ್ದೇಶ‌ ಎಂಬುದು ಇದೀಗ ಸ್ವಷ್ಟವಾಗುತ್ತಿದೆ.‌ ವಿವಾದ ಆರಂಭದ ಬೆನ್ನಲ್ಲೆ ಕುಂದಾಪುರದಲ್ಲಿಯೇ ಈ ಪ್ರಯತ್ನ ನಡೆದಿದ್ದರೂ, ಪೊಲೀಸರ ಸಮಯಪ್ರಜ್ಞೆಯಿಂದ ಅನಾಹುತ ನಡೆದಿಲ್ಲ. ಹಿಂದೂಗಳ ಮತದಿಂದ ಗೆದ್ದಿರುವ ಬಿಜೆಪಿ ಸರ್ಕಾರದಿಂದ ಹಿಂದೂ ಕಾರ್ಯಕರ್ತ ರಕ್ಷಣೆಯ ಕೆಲಸ ನಡೆಯಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸ ಆಗಬೇಕು. ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಅವರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು. ಹಿಂದೂ ಸಮಾಜ ಯಾವುದೆ ಕಾರಣಕ್ಕೂ ದುರ್ಬಲ ಸಮಾಜ ಅಲ್ಲ ಎಂದು ಹೇಳಿದರು.

ಬಜರಂಗದಳ ತಾಲ್ಲೂಕು ಸಂಚಾಲಕ ಸುಧೀರ್ ಮೇರ್ಡಿ, ಸಹ ಸಂಚಾಲಕ ವಸಂತ ಸಂಗಮ್, ಸುರಕ್ಷಾ ಪ್ರಮುಖ್ ಗುರುರಾಜ್ ಸಂಗಮ್, ಸಂಘಟನೆಯ ಪ್ರಮುಖರಾದ ದಿನೇಶ್ ಆಚಾರ್ ಕಂಡ್ಲೂರು, ಮಾರುತಿ, ಪ್ರದೀಪ್, ಪ್ರಮುಖರಾದ ವೀಣಾ ಭಾಸ್ಕರ್ ಮೆಂಡನ್, ಶಂಕರ ಅಂಕದಕಟ್ಟೆ, ರಾಜೇಶ್ ಕಾವೇರಿ, ಸುಧೀರ್ ಕೆ.ಎಸ್ ಉಪಸ್ಥಿತರಿದ್ದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles