ಶ್ರೀನಗರ: ಹಿಮಪಾತದಲ್ಲಿ ಸಿಲುಕಿ ಕೊಡಗಿನ ವೀರ ಯೋಧ ಅಲ್ತಾಫ್ ಅಹ್ಮದ್ (37) ಮರಣಹೊಂದಿದ ಘಟನೆ ಬುಧವಾರ ಮುಂಜಾನೆ ಶ್ರೀನಗರದಲ್ಲಿ ನಡೆದಿದೆ.
ಅಲ್ತಾಫ್ ಅಹ್ಮದ್ ಕಳೆದ 19 ವರ್ಷದಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಒಸಿ ರೆಜಿಮೆಂಟ್ ನಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಇತ್ತೀಚೆಗೆ ಶ್ರೀನಗರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು. ಅವರು ಬುಧವಾರ ಮುಂಜಾನೆ ಗಡಿ ರಕ್ಷಣಾ ಕರ್ತವ್ಯದಲ್ಲಿದ್ದ ವೇಳೆ ಹಿಮಪಾತವಾಗಿದ್ದು ಅದರಡಿಯಲ್ಲಿ ಸಿಲುಕಿ ಹುತಾತ್ಮರಾಗಿದ್ದಾರೆ.
ಹುತಾತ್ಮ ಯೋಧನ ಮೃತದೇಹ ಶುಕ್ರವಾರ ಕೊಡಗಿಗೆ ಬರುವ ನಿರೀಕ್ಷೆ ಇದ್ದು, ನಂತರ ವಿರಾಜಪೇಟೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದೆಂದು ಕುಟುಂಬ ಮೂಲಗಳು ತಿಳಿಸಿವೆ.