ಬಾಗಲಕೋಟೆ: ಸೀರೆಗಳಲ್ಲಿ ಇಳಕಲ್ ಸೀರೆ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ದೇಶ-ವಿದೇಶಗಳಲ್ಲೂ ಇಳಕಲ್ ಸೀರೆಗೆ ಬೇಡಿಕೆ ಇದೆ. ಹಾಗೂ ಗುಳೇದಗುಡ್ಡ ಖಣ (ರವಿಕೆ)ವೂ ಕೂಡ ಬಹಳ ಪ್ರಸಿದ್ಧಿ ಪಡೆದಿದೆ. ಇದೀಗ ಇಂತಹ ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಖಣಕ್ಕೆ ಈ ಬಾರಿ ಗಣರಾಜ್ಯೋತ್ಸವ ಗೌರವ ದೊರಕಿದೆ. ದೆಹಲಿಯಲ್ಲಿ ಜನವರಿ 26 ರಂದು ನಡೆಯುವಂತಹ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಖಣ(ರವಿಕೆ) ಆಯ್ಕೆಯಾಗಿದೆ. ಈ ಬಾರಿ ಕರ್ನಾಟಕದ ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಖಣ ಎಲ್ಲರ ಗಮನ ಸೆಳೆಯಲಿದೆ.
ಇಳಕಲ್ ಸೀರೆ, ಗುಳೇದಗುಡ್ಡ ಖಣ ಗಣರಾಜ್ಯೋತ್ಸವ ಸ್ತಬ್ಧಚಿತ್ರಕ್ಕೆ ಆಯ್ಕೆಯಾಗಿರುವುದರಿಂದ ಬಾಗಲಕೋಟೆ ಜಿಲ್ಲೆಯ ನೇಕಾರರು ಸಂಭ್ರಮಿಸುತ್ತಿದ್ದಾರೆ. ನೇಕಾರ ಸಮುದಾಯದ ಮುಖಂಡ ಶಿವಲಿಂಗ ಟರ್ಕಿ ಸಂತೋಷ ಅವರು “ಈ ಬಾರಿಯ ಗಣರಾಜ್ಯೋತ್ಸವ ಸ್ತಬ್ಧಚಿತ್ರಕ್ಕೆ ನಾವು ಹೆಣೆಯುವಂತಹ ಇಳಕಲ್ ಸೀರೆ, ಗುಳೇದಗುಡ್ಡ ಖಣ ಆಯ್ಕೆಯಾಗಿದೆ. ಇದು ಬಹಳ ಖುಷಿ ತಂದಿದೆ. ನಮ್ಮ ಪೂರ್ವಜರ ಕಾಲದಿಂದಲೂ ಇಳಕಲ್ ಸೀರೆ ಗುಳೇದಗುಡ್ಡ ಖಣ ನೇಯುತ್ತಿದ್ದೇವೆ. ಆಗಿನಿಂದಿಲೂ ಇಳಕಲ್ ಸೀರೆ ಗುಳೇದಗುಡ್ಡ ಖಣ ತಮ್ಮ ಬೇಡಿಕೆ ಉಳಿಸಿಕೊಂಡು ಬಂದಿವೆ. ನಮ್ಮ ಸಾಂಪ್ರದಾಯದ ಪ್ರತೀಕವಾಗಿರುವ ಇವುಗಳನ್ನು ಗಣರಾಜ್ಯೋತ್ಸವ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಆಯ್ಕೆ ಮಾಡಿರುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಧನ್ಯವಾದಗಳು” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಗಣರಾಜ್ಯೋತ್ಸವದ ದಿನ ನಡೆಯುವ 16 ಕರಕುಶಲ ವಸ್ತುಗಳ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಇಳಕಲ್ ಸೀರೆ ಗುಳೇದಗುಡ್ಡ ಖಣ ಸ್ಥಾನ ಪಡೆದಿದೆ. ಇದರಿಂದ ನೇಕಾರರಿಗೆ ಇನ್ನಷ್ಟು ಇಳಕಲ್ ಸೀರೆ, ಗುಳೇದಗುಡ್ಡ ಖಣ ನೇಯಲು ಉತ್ತೇಜನ ನೀಡಿದಂತಾಗಿದೆ. ಇಳಕಲ್ ಸೀರೆ, ಗುಳೇದಗುಡ್ಡ ಖಣ ಇತ್ತೀಚೆಗೆ ಆನ್ ಲೈನ್ ಶಾಪಿಂಗ್ ನಲ್ಲೂ ಲಭ್ಯವಿದೆ. ಗಣರಾಜ್ಯೋತ್ಸವ ಗೌರವದಿಂದ ಶತಮಾನಗಳಿಂದಲೂ ಬಹಳ ಬೇಡಿಕೆ ಇರುವಂತಹ ಇಳಕಲ್ ಸೀರೆ, ಗುಳೇದಗುಡ್ಡ ಖಣದ ಗೌರವ, ಪ್ರಸಿದ್ಧಿ ಮತ್ತಷ್ಟು ಹೆಚ್ಚಿದೆ.