ಬೆಂಗಳೂರು: ರಾಜ್ಯಾದ್ಯಂತ ಜನವರಿ 31 ರಿಂದ ನೈಟ್ ಕರ್ಫ್ಯೂ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೋಟೆಲ್, ರೆಸ್ಟೋರೆಂಟ್, ಪಬ್ಗಳಲ್ಲಿನ ಶೇ.50 ರಷ್ಟು ಮಿತಿಯನ್ನು ವಾಪಾಸ್ ಪಡೆಯಲಾಗಿದೆ ಎಂದು ಬೆಂಗಳೂರಿನಲ್ಲಿ ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಈ ಕುರಿತು ಜನವರಿ 29ರಂದು ನಡೆದ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಕೋವಿಡ್ ಸಭೆಯ ಬಳಿಕ ಸುದ್ದಿಗಾರರೊಂದೊಗೆ ಮಾತನಾಡಿದ ಅವರು, ಪ್ರಸ್ತುತ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆ ತಜ್ಞರ ವರದಿಯ ಆಧಾರದ ಮೇಲೆ ಸೋಮವಾರದಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂವನ್ನು ರದ್ದುಪಡಿಸಲಾಗಿದೆ ಎಂದು ಹೇಳಿದರು. ಆದರೆ, ಜಾತ್ರೆ, ರ್ಯಾಲಿ, ಧರಣಿ, ಪ್ರತಿಭಟನೆ ಸೇರಿದಂತೆ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
ಇನ್ನು, ಮದುವೆಗಳಿಗೆ ಒಳಾಂಗಣದಲ್ಲಿ 200 ಜನರಿಗೆ. ಹೊರಾಂಗಣದಲ್ಲಿ 300 ಜನರಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಕಚೇರಿಗಳ ಕೆಲಸದ ಶೇ.50 ರಷ್ಟು ಮಿತಿಯನ್ನು ವಾಪಾಸ್ ಪಡೆಯಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ಶೇ.50 ರಷ್ಟು ಜನ ಮಿತಿಯೊಂದಿಗೆ ಸೇವೆಗಳ ಪುನರಾರಂಭಕ್ಕೆ ಅವಕಾಶ ನೀಡಲಾಗಿದೆ. ಜಿಮ್, ಈಜುಕೊಳಗಳಿಗೆ ಶೇ.50 ರ ಮಿತಿಯನ್ನು ನಿಗದಿಪಡಿಸಲಾಗಿದ್ದು, ಸ್ಪೋರ್ಟ್ಸ್ ಸ್ಟೇಡಿಯಂಗಳಲ್ಲಿಯೂ ಕೂಡ ಶೇ.50 ರ ಮಿತಿಯನ್ನು ಮುಂದುವರಿಸಲಾಗಿದೆ.