ಮಲಪ್ಪುರಂ (ಕೇರಳ): ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕೇರಳದಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದು, ಇದರಿಂದ ರೈಲಿನ ಕಿಟಕಿಗಳು ಜಖಂಗೊಂಡಿವೆ. ಏಳು ದಿನಗಳ ಹಿಂದಷ್ಟೇ ಕೇರಳದಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಗೊಂಡಿತ್ತು.
ಏ.25ರಂದು ಪ್ರಧಾನಿ ಮೋದಿ ಈ ರೈಲಿಗೆ ಚಾಲನೆ ನೀಡಿದ್ದರು. ಸೋಮವಾರ ಸಂಜೆ 5 ಗಂಟೆಗೆ ಉತ್ತರ ಕೇರಳ ಜಿಲ್ಲೆಯ ತಿರುನಾವಯ ಮತ್ತು ತಿರೂರ್ ನಡುವೆ ಹಾದು ಹೋಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ರೈಲು ಕಾಸರಗೋಡಿನಿಂದ ತಿರುವನಂತಪುರಕ್ಕೆ ತೆರಳುತ್ತಿತ್ತು. ಪ್ರಕರಣ ದಾಖಲಿಸಿಕೊಂಡಿರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಹೌರಾದಿಂದ ನ್ಯೂ ಜಲಫೈಗುರಿಗೆ ಸಂಪರ್ಕ ನೀಡುವ ರೈಲು ಕಥಿಯಾ ವಿಭಾಗದ ಸಾಮ್ಸಿ ಕುಮಾರ್ಗಂಜ್ ಬಳಿ ತೆರಳುತ್ತಿದ್ದಾಗ ಎರಡು ಬಾರಿ ಅನಾಮಿಕರು ಕಲ್ಲು ತೂರಿದ್ದರು. ಮಹಾರಾಷ್ಟ್ರದ ನಾಗ್ಪುರ ಮತ್ತು ಛತ್ತೀಸ್ಗಢದ ಬಿಲಾಸ್ಪುರ ನಡುವೆ ಸಂಚರಿಸುತ್ತಿದ್ದಾಗ ಜಾನುವಾರುಗಳಿಗೆ ಡಿಕ್ಕಿ ಹೊಡೆದಿತ್ತು. ಮುಂಬೈನ ಸೆಂಟ್ರಲ್ ವ್ಯಾಪ್ತಿಯ ಅತುಲ್ ಸ್ಟೇಶನ್ ಬಳಿ ತೆರಳುತ್ತಿದ್ದ ವೇಳೆ ಜಾನುವಾರುಗಳಿಗೆ ಗುದ್ದಿತ್ತು. ವಂದೇ ಭಾರತ್ ರೈಲಿಗೆ ಸಿಲುಕಿ 54 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಗುಜರಾತ್ನಲ್ಲಿ ನಡೆದಿತ್ತು.