ಕೆಂಜೂರು: ಅರೆಹೊಳೆ ಪ್ರತಿಷ್ಠಾನವು ಆಯೋಜಿಸಿದ್ದ ಅರೆಹೊಳೆ ಯಕ್ಷಸಂಜೆ ಕಾರ್ಯಕ್ರಮವು ಕೆಂಜೂರು ಸಮೀಪದ ಬಲ್ಲೆಬೈಲುವಿನಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮದಲ್ಲಿ, ಯಕ್ಷಗುರು ಐರೋಡಿ ಮಂಜುನಾಥ ಕುಲಾಲ್ ಯಡ್ತಾಡಿಯವರಿಗೆ ಸುಮಕೃಷ್ಣ ಯಕ್ಷ ಪುರಸ್ಕಾರ 2021ನ್ನು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ ಅವರು ಗ್ರಾಮೀಣ ಪ್ರದೇಶಗಳಲ್ಲಿ ಕಲಾ ಶಿಕ್ಷಣ ನೀಡಿ, ಪ್ರತಿಭೆಗಳಿಗೆ ಪ್ರದರ್ಶನಕ್ಕೆ ವೇದಿಕೆ ಒದಗಿಸುವ ಅರೆಹೊಳೆ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದರು.
ನಂದಗೋಕುಲ ಯಕ್ಷತರಬೇತಿ ಕೇಂದ್ರದ ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಂದ ಗುರು ಮಿಥುನ್ ಹಂದಾಡಿ ನಿರ್ದೇಶನದಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ ಹಾಗೂ ಮಂಗಳೂರಿನ ಯಕ್ಷಾಭಿನಯ ಬಳಗದವರಿಂದ ಮಂಜುನಾಥ ಕುಲಾಲ್ ನಿರ್ದೇಶನದಲ್ಲಿ ಧ್ರುವಚರಿತ್ರೆ ಯಕ್ಷಗಾನ ಪ್ರದರ್ಶನ ನಡೆಯಿತು. ಇದೇ ಸಂದರ್ಭ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರವಿರಾಜ್ ಹೆಚ್.ಪಿ ಅವರನ್ನು ಅಭಿನಂದಿಸಲಾಯಿತು.
ಆಕಾಶವಾಣಿಯ ದೇವು ಹನೆಹಳ್ಳಿ ಅಭಿನಂದನಾ ಮಾತುಗಳನ್ನಾಡಿದರು. ಜಿ.ಪಂ. ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಹಾಗೂ ವಿದ್ಯಾರ್ಥಿ, ಪೋಷಕರ ಪ್ರತಿನಿಧಿ ನಿತ್ಯಾನಂದ ಶೆಟ್ಟಿ, ಬಾಳೆಗುಂಡಿ ಪದ್ಮನಾಭ ಭಟ್, ಪುಷ್ಪಲತಾ ಶ್ರೀನಿವಾಸ್, ವಿಶಾಲಾಕ್ಷಿ, ಕೃತಿ ಪದ್ಮನಾಭ್, ಶಶಿಕಲಾ ಪದ್ಮನಾಭ್, ಗೀತಾ ಅರೆಹೊಳೆ ಉಪಸ್ಥಿತರಿದ್ದರು.
ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿ, ಕಾರ್ತಿಕ್ ಬ್ರಹ್ಮಾವರ ವಂದಿಸಿದರು. ವಿಶಾಲಾಕ್ಷಿ ರಾವ್ ನಿರೂಪಿಸಿದರು.