ಉಡುಪಿ: ಸುಪ್ರೀಂ ಕೋರ್ಟಿನ ತೀರ್ಪಿನಂತೆ ರಾತ್ರಿ 10ಗಂಟೆಯಿಂದ ಮುಂಜಾನೆ 6ಗಂಟೆವರೆಗೆ ಧಾರ್ಮಿಕ ಕೇಂದ್ರಗಳಲ್ಲಿ ಮಾತ್ರವಲ್ಲದೆ ಯಾವುದೇ ಕಾರ್ಯಕ್ರಮಗಳಲ್ಲಿಯೂ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಇದರಿಂದ ಆಝಾನ್ಗಳಿಗೆ ಮಾತ್ರವಲ್ಲದೆ ಮಠಮಂದಿರಗಳಿಗೂ ತೊಂದರೆ ಆಗುತ್ತದೆ. ಈ ಕುರಿತು ಈಗಾಗಲೇ ವಿವಿಧ ಸ್ವಾಮೀಜಿಗಳು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸಅದಿ ತಿಳಿಸಿದ್ದಾರೆ.
ಉಡುಪಿ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಸೀದಿಗಳಲ್ಲಿ ಬೆಳಗ್ಗಿನ ಆಝಾನ್ ಹೊರತುಪಡಿಸಿ ಉಳಿದ ಯಾವುದೇ ಆಝಾನ್ಗಳಿಗೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ತೊಂದರೆ ಆಗುವುದಿಲ್ಲ. ಆದುದರಿಂದ ಬೆಳಗ್ಗಿನ ಆಝಾನ್ ಕುರಿತು ಕರಾವಳಿ ಜಿಲ್ಲೆಗಳ ಉಲೆಮಾಗಳು ಎರಡು ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.
ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡುವ ಕುರಿತು ಮಾತನಾಡಿದ ಅವರು ರಾಜ್ಯದ ಸುಮಾರು 2000 ಮದರಸಾಗಳಲ್ಲಿ ಈಗಾಗಲೇ ರಾಷ್ಟ್ರಗೀತೆಯನ್ನು ಹಾಡಲಾಗುತ್ತಿದೆ ಮತ್ತು ದೇಶ ಪ್ರೇಮದ ಭೋದನೆಗಳನ್ನು ಪಠ್ಯದಲ್ಲಿಯೇ ಅಳವಡಿಸಲಾಗಿದೆ. ವಕ್ಫ್ ಅಧೀನದಲ್ಲಿರುವ 1900 ಮದರಸಾಗಳಲ್ಲಿಯೂ ರಾಷ್ಟ್ರಗೀತೆ ಹಾಡುವ ಕುರಿತು ವಕ್ಫ್ ಮಂಡಳಿಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಈ ಸಂದರ್ಭ ವಕ್ಫ್ ಮಂಡಳಿಯ ಸದಸ್ಯ ಜಿ.ಯಾಕೂಬ್ ಸಾಹೇಬ್, ವಕ್ಫ್ ಸಲಹಾ ಮಂಡಳಿಯ ಮಾಜಿ ಉಡುಪಿ ಜಿಲ್ಲಾಧ್ಯಕ್ಷ ಮಟಪಾಡಿ ಇಬ್ರಾಹಿಂ, ಯಾಹ್ಯ ನಕ್ವಾ, ವಕ್ಫ್ ಅಧಿಕಾರಿ ನಾಝೀಯಾ ಮತ್ತಿತರರು ಪಸ್ಥಿತರಿದ್ದರು.