ಕಾರ್ಕಳ: ಅರಣ್ಯ ಇಲಾಖೆಯ 15 ಲಕ್ಷ ಎಕರೆ ಜಾಗವನ್ನು ಮರಳಿ ರೈತರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಅದರಂತೆ ರಾಜ್ಯದಲ್ಲಿನ ಸರ್ವೆ ಇಲಾಖೆಗೆ 800 ಅಧಿಕಾರಿಗಳ ನೇಮಕ ಮಾಡಿದ್ದು, ಮತ್ತೆ 800 ಹೊಸ ಅಧಿಕಾರಿಗಳ ನೇಮಕ ಮಾಡಲಾಗುವುದು. ಅದರಂತೆ ದಾಖಲೆಯನ್ನು ಮನೆ ಮನೆಗೆ ಉಚಿತವಾಗಿ ತಲುಪಿಸುವ ಸರ್ಕಾರದ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಕಾರ್ಕಳ ತಾಲೂಕು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಕಳ ಹಾಗೂ ಹೆಬ್ರಿ ತಾಲೂಕು ಮಟ್ಟದ ಕಂದಾಯ ಮೇಳ ಕಾರ್ಯಕ್ರಮವು ಕಾರ್ಕಳ ತಾಲೂಕು ಕುಕ್ಕಂದೂರು ಗ್ರಾ.ಪಂ. ಮೈದಾನದಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಕಾರ್ಕಳ ಕಂದಾಯ ಮೇಳವು ರಾಜ್ಯಕ್ಕೆ ಮಾದರಿಯಾಗಿದ್ದು ಮುಂದಿನ ದಿನಗಳಲ್ಲಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಿ ಎಲ್ಲಾ ತಾಲೂಕುಗಳಿಗೆ ವಿಸ್ತರಿಸಲಾಗುವುದು. ಬಾಕಿ ಇದ್ದ 13,700 ಕಡತಗಳಲ್ಲಿ 11,000 ಕಡತಗಳು ವಿಲೇವಾರಿಯಾಗಿ ಕಡತ ಮೇಳವು ಯಶಸ್ವಿ ಗೊಂಡಿದೆ. ಸಮಾಜದ ಪ್ರತಿಯೊಬ್ಬ ಕಟ್ಟಕಡೆಯ ಫಲಾನುಭವಿಗೂ ಇದರ ಪ್ರಯೋಜನವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮರಾವ್, ಸಹಾಯಕ ಕಮಿಷನರ್ ರಾಜು, ಸಿಇಒ ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕರ್ನಾಟಕ ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಕರಾವಳಿ ಅಭಿವೃದ್ಧಿ ನಿಗಮ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಕಾಪು ಲಾಲಾಜಿ ಮೆಂಡನ್ ಕಾರ್ಕಳ ಎಪಿಎಂಸಿ ಅಧ್ಯಕ್ಷ ರತ್ನಾಕರ್ ಅಮೀನ್ ಹಾಗೂ ಇತರ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಸರ್ಕಾರಿ ಸೌಲಭ್ಯಗಳನ್ನು 4367 ಫಲಾನುಭವಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮವನ್ನು ಕಾರ್ಕಳ ತಹಶಿಲ್ದಾರ್ ಪುರಂದರ ಸ್ವಾಗತಿಸಿದರು.