ಹೆಬ್ರಿ: ತಹಶೀಲ್ಧಾರರು ಬಿಜೆಪಿ ಕಾರ್ಯಕರ್ತರನ್ನು ಕೂರಿಸಿಕೊಂಡು ಕಡತ ವಿಲೇವಾರಿ ಮಾಡುತ್ತಾರೆ. ಹೀಗೆ ಮಾಡುವುದಾದರೆ ತಾಲ್ಲೂಕು ಕಚೇರಿ ಯಾಕೆ? ಅವರು ತಾ. ಕಚೇರಿಯನ್ನೇ ಬಿಜೆಪಿ ಕಚೇರಿ ಮಾಡಿಕೊಳ್ಳಲಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಹೆಬ್ರಿ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಕಾರ್ಯಕರ್ತರೇ ಮಧ್ಯವರ್ತಿಗಳಾಗಿ ತಾ. ಕಚೇರಿಯಲ್ಲಿ ಕೆಲಸ ಮಾಡಿಸಿಕೊಡುತ್ತಾರೆ. ತಾ. ಕಚೇರಿಯಲ್ಲಿ ಕಮೀಷನ್ ಕೊಟ್ಟರೆ ಮಾತ್ರ ಕೆಲಸಗಳು ಆಗುತ್ತಿದ್ದು, ಹಣ ಕೊಟ್ಟರೇ ಮಾತ್ರ ಕೆಲಸ ಎಂಬ ಸ್ಥಿತಿ ನಿರ್ಮಾಣವಾಗಿದೆ. ಕಾರ್ಕಳ ಕ್ಷೇತ್ರದ ಕಂದಾಯ ಮತ್ತು ಸರ್ವೆ ಇಲಾಖೆಯಲ್ಲಿ ಯಾವುದೇ ಕಡತಗಳ ವಿಲೇವಾರಿ ಆಗುತ್ತಿಲ್ಲ. ಜನರು ವರ್ಷಗಟ್ಟಲೇ ಕಡತ ಹಿಡಿದು ಅಲೆದಾಟ ಮಾಡಬೇಕಿದೆ. ಕಾರ್ಕಳ ಹೆಬ್ರಿಗೆ ಒಬ್ಬರೇ ತಹಶೀಲ್ಧಾರ್ ಇರುವುದರಿಂದ ಅವರಿಗೆ ಕೆಲಸದ ಒತ್ತಡವಿದೆ. ಮಾತೃ ಇಲಾಖೆಯಾದ ಕಂದಾಯ ಇಲಾಖೆಯಲ್ಲಿ ಎಸಿಯಿಂದ ಹಿಡಿದು ಸಾಮಾನ್ಯ ನೌಕರರ ವರೆಗೂ ಲಂಚದ ಬದಲು ಕಮೀಷನ್ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ಸಾಮಾನ್ಯ ಜನರ ಕೆಲಸಗಳು ಆಗುತ್ತಿಲ್ಲ. ಡಿಸಿ ಈ ಎಲ್ಲಾ ವಿಚಾರಗಳ ಬಗ್ಗೆ ತನಿಖೆ ನಡೆಸಬೇಕೆಂದು ಮಂಜುನಾಥ ಪೂಜಾರಿ ತಿಳಿಸಿದರು.
ಬಿಜೆಪಿ ಸರ್ಕಾರ ಜನರಿಗೆ ಒಂದೇ ಒಂದು ಉಪಯೋಗವಾಗುವ ಕೆಲಸ ಮಾಡುತ್ತಿಲ್ಲ. ಧರ್ಮದ ಹೆಸರಿನಲ್ಲಿ ಮನೆ ಮನವನ್ನು ಒಡೆದು ಆಳುತ್ತಿದ್ದು, ಧರ್ಮದ ಹೆಸರಿನ ಅಪಪ್ರಚಾರವೇ ಬಿಜೆಪಿಯ ಮತ ಪಡೆಯುವ ತಂತ್ರ. ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಮುಂದಿನ ಚುನಾವಣೆಗಾಗಿ ಜನರಿಗೆ ಆಸೆ ಹುಟ್ಟಿಸಿ ನಾಟಕವಾಡುತ್ತಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಬ್ಬಿನಾಲೆ ರಂಜನಿ ಹೆಬ್ಬಾರ್, ಹೆಬ್ರಿ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಸುರೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ ಶೆಟ್ಟಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎಚ್.ಜನಾರ್ಧನ್, ಪ್ರಮುಖರಾದ ಗುಳ್ಕಾಡು ಭಾಸ್ಕರ ಶೆಟ್ಟಿ, ಶಶಿಕಲಾ ದಿನೇಶ್ ಪೂಜಾರಿ, ವಿಶು ಕುಮಾರ್ ಮುದ್ರಾಡಿ, ಸುಂದರ ಶಿರೂರು ಮುಂತಾದವರು ಉಪಸ್ಥಿತರಿದ್ದರು.