ಬೆಂಗಳೂರು: ಕೊರೋನಾ 3 ನೇ ಅಲೆಯ ತೀವ್ರತೆಯು ಮುಂದಿನ 2 ರಿಂದ 3 ವಾರಗಳಲ್ಲಿ ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಐಸಿಎಮ್ಆರ್ ನ ಮಾರ್ಗಸೂಚಿಯಂತೆ ಕೊರೋನಾ ಲಕ್ಷಣ ಇದ್ದವರಿಗೆ ಮಾತ್ರ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ಜನರು ತಮ್ಮ ಜವಬ್ದಾರಿ ಹಾಗೂ ಕರ್ತವ್ಯವನ್ನು ಅರಿತು ಎಚ್ಚರಿಕೆಯಿಂದ ಇದ್ದರೆ ಕೊರೋನಾ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ರಾಜ್ಯ ಸರ್ಕಾರವು ತಜ್ಞರ ಅಭಿಪ್ರಾಯದ ಮೇರೆಗೆ ವಾರಾಂತ್ಯದ ಕರ್ಫ್ಯೂ ರದ್ದುಗೊಳಿಸಿ, ರಾತ್ರಿಯ ಕರ್ಫ್ಯೂವನ್ನು ಮುಂದುವರೆಸಲು ಆದೇಶ ನೀಡಿದೆ. ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇರುವುದು ಸಮಾಧಾನಕರ ಸಂಗತಿ. ಒಂದು ವೇಳೆ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯಲ್ಲಿ ಏರಿಕೆಯಾದರೆ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಿದೆ ಎಂದರು.