ಉಡುಪಿ: ಯಾರಿಗೆ ಟಿಕೇಟ್ ಕೊಡಬೇಕು ಕೊಡಬಾರದು ಎಂದು ಬಿಜೆಪಿ ನಿರ್ಧರಿಸುತ್ತೆ. ಕಾಂಗ್ರೆಸ್ ಪಕ್ಷದ ಹೇಳಿಕೆ ರಾಜಕೀಯ ಪಕ್ಷವೊಂದರ ಜವಬ್ದಾರಿ ಹೇಳಿಕೆಯಲ್ಲ. ಇತಿಹಾಸದಲ್ಲೇ ಪ್ರಥಮ ಬಾರಿಗೆ ಹರ್ಷನ ಕುಟುಂಬದ ಪೂರ್ತಿ ಸಮಸ್ಯೆಗಳನ್ನು ಪರಿಹಾರ ಮಾಡಲು ಬಿಜೆಪಿ ಮುಂದಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ನ ಅಧಿಕಾರಾವಧಿಯಲ್ಲಿ 23 ಹಿಂದೂ ಕಾರ್ಯಕರ್ತರ ಕೊಲೆಯಾಗಿದ್ದು, ಈ ಎಲ್ಲಾ ಸಾವು-ನೋವುಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನಿತ್ತು? ಬಿಜೆಪಿಯು ಹರ್ಷನ ಕುಟುಂಬದವರಿಗಾದ ನೋವಿಗೆ ಸ್ಪಂದಿಸುವಂತ ಕೆಲಸ ಮಾಡುತ್ತಿದೆ. ಹರ್ಷನ ಮನೆಗೆ ಹೋಗಿ ಅವರ ತಂದೆ-ತಾಯಿಯ ಜೊತೆ ಮಾತನಾಡಿ ಅವರ ಕುಟುಂಬಕ್ಕೆ ನೆರವನ್ನು ನೀಡುವ ಕೆಲಸ ಮಾಡಿದ್ದೇವೆ. ಭಯೋತ್ಪಾದಕರಾಗಿದ್ದುಕೊಂಡು ಉಗ್ರಗಾಮಿಗಳಿಗೆ ಪ್ರೊತ್ಸಾಹ ನೀಡುತ್ತಿರುವವರು ಹರ್ಷನನ್ನು ಅಚಾನಕ್ಕಾಗಿ ಕೊಲೆ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರ ಇದನ್ನೆಲ್ಲಾ ನಿಯಂತ್ರಣ ಮಾಡಿ ಅವರಿಗೆ ಪ್ರೋತ್ಸಾಹ ನೀಡದೆ, ಅವರ ಮೇಲಿದ್ದ ಕೇಸುಗಳನ್ನು ವಾಪಾಸ್ಸು ಪಡೆಯದೇ ಇದ್ದರೆ ಇಂತಹ ಅನಾಹುತ ಆಗುತ್ತಿರಲಿಲ್ಲ. ಯಾವ ಕಾರಣಕ್ಕೂ ಹರ್ಷನನ್ನು ಕೊಂದವರಿಗೆ ರಿಯಾಯಿತಿ ಕೊಡುವುದಿಲ್ಲ. ಅದರ ಹಿಂದಿರುವ ಷಡ್ಯಂತರವನ್ನು ಬಯಲಿಗೆಳೆಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.