ಮೂಡುಬಿದಿರೆ: ಕೋಮುಹಿಂಸೆಗೆ ಪ್ರಚೋದನೆ ನೀಡುತ್ತಿರುವ ಸಚಿವ ಈಶ್ವರಪ್ಪರಿಂದ ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಕೆಲವು ಮುಸಲ್ಮಾನ ಗೂಂಡಾಗಳನ್ನು ಬಳಸಿಕೊಂಡು ಹರ್ಷಾನನ್ನು ಕೊಲೆ ಮಾಡಿಸಿದ್ದೀರಿ. ನಿಮ್ಮಂತಹ ದೇಶವಿರೋಧಿಗಳ ವಿರುದ್ಧ ಮುಂದಿನ ಚುನಾವಣೆಯಲ್ಲಿ ಹೋರಾಟ ನಡೆಸಿ ತಕ್ಕ ಪಾಠ ಕಲಿಸುತ್ತೇವೆ ಎಂದು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಎಸ್ಡಿಪಿಐ ಅಧ್ಯಕ್ಷ ಆಸಿಫ್ ಕೋಟೆಬಾಗಿಲು ಆಕ್ರೋಶ ವ್ಯಕ್ತಪಡಿಸಿದರು.
ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಎಸ್ಡಿಪಿಐ ವತಿಯಿಂದ ಮೂಡುಬಿದಿರೆಯಲ್ಲಿ ಬುಧವಾರ ಸಂಜೆ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಡಿಕೆಶಿ ಅವರು ಈಶ್ವರಪ್ಪ ಹೆಗಲಿಗೆ ಕೈಹಾಕಿ ಸುತ್ತಾಡುತ್ತಿದ್ದಾರೆ. ಮುಸಲ್ಮಾನರ ಬೆಂಬಲ ಇಲ್ಲದೆ ನಿಮಗೆ ಚುನಾವಣೆ ಗೆಲ್ಲಲು ಅಸಾಧ್ಯ ಎಂದು ಗೊತ್ತಿದ್ದು ಈ ರೀತಿ ಮಾಡುತ್ತಿದ್ದೀರಿ. ಕರ್ನಾಟಕದಲ್ಲಿ ಅತ್ಯಂತ ಹೆಚ್ಚಿನ ಮತವನ್ನು ಹೊಂದಿರುವ ಮುಸಲ್ಮಾನ ಸಮುದಾಯಕ್ಕೆ ನೀವು ಅವಹೇಳನ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದೀರಿ ಮುಂದಿನ ಚುನಾವಣೆಯಲ್ಲಿ ನಿಮಗೆ ಎಸ್ಡಿಪಿಐ ಬೃಹತ್ ರೀತಿಯಲ್ಲಿ ತಡೆ ಒಡ್ಡಲಿದೆ ಎಂದು ಎಚ್ಚರಿಸಿದರು.
ಮಂಗಳೂರು ಉತ್ತರ ಕ್ಷೇತ್ರದ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಮಾತನಾಡಿ ಮುಂಬರುವ ಚುನಾವಣೆ ವೇಳೆ ಕೋಮುಗಲಭೆ ಸೃಷ್ಟಿಸಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಸಚಿವ ಈಶ್ವರಪ್ಪ ಅವರ ಪ್ರಚೋದನೆಯಿಂದ ಕಾರ್ಯಕರ್ತ ಹರ್ಷಾ ಅವರ ಕೊಲೆ ನಡೆದಿರುವುದು ಪುಷ್ಠಿ ನೀಡಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳ ಹರ್ಷಾನನ್ನು ಕೊಲೆ ಮಾಡಿದ ಆರೋಪಿಗಳ ಮಾಹಿತಿ ಪೊಲೀಸರಿಗಿಂತ ಮೊದಲೇ ಈಶ್ವರಪ್ಪ ಅವರಿಗೆ ಗೊತ್ತಾಗಬೇಕಾದರೆ ಈ ಕೃತ್ಯ ಇವರ ಪ್ರಚೋದನೆಯಿಂದ ನಡೆದಿದೆ ಎನ್ನುವುದು ಸಾಬೀತಾಗಿದೆ. ಈಶ್ವರಪ್ಪ ಅವರನ್ನು ಮಂಪರು ಪರೀಕ್ಷೆ ಮಾಡಿಸಿದರೆ ಸತ್ಯ ತಿಳಿಯುತ್ತದೆ ಎಂದರು.
ಈ ಸಂದರ್ಭ ಆಸಿಫ್ ತೋಡಾರು, ನಿಸಾರ್ ಮಾರೂರು ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.