ಬೆಂಗಳೂರು: ಉಕ್ರೇನ್ ವಿರುದ್ಧ ರಷ್ಯಾ ಸೇನೆಯ ಶೆಲ್ ದಾಳಿಯಲ್ಲಿ ಮೃತಪಟ್ಟ ಹಾವೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಜ್ಞಾನ ಗೌಡರ್ ಅವರ ಮೃತದೇಹವನ್ನು ಕರೆತರುವುದು ಸರ್ಕಾರದ ಮೊದಲ ಆದ್ಯತೆ. ಸರ್ಕಾರ ಈ ವೇಳೆ ನವೀನ್ ಕುಟುಂಬದವರ ಜೊತೆ ಬೆಂಗಾವಲಾಗಿ ನಿಲ್ಲುತ್ತದೆ. ಸರ್ಕಾರ ಖಂಡಿತವಾಗಿಯೂ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನವೀನ್ ಮೃತದೇಹವನ್ನು ವಿದೇಶಾಂಗ ಸಚಿವಾಲಯದ ಜೊತೆ, ವಿದೇಶಾಂಗ ಸಚಿವರ ಜೊತೆ ಹಾಗೂ ಭಾರತೀಯ ರಾಯಭಾರಿ ಜೊತೆ ಮಾತನಾಡಿ ಊರಿಗೆ ತರುವ ಪ್ರಯತ್ನ ಮಾಡುತ್ತೇವೆ. ಉಕ್ರೇನ್ ನಲ್ಲಿರುವ ಭಾರತೀಯರನ್ನು ಮತ್ತು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಸುಮಾರು 26 ವಿಮಾನಗಳಲ್ಲಿ ಕರೆತರುವ ಪ್ರಯತ್ನವಾಗುತ್ತಿದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಜೊತೆಗೆ ಕನ್ನಡಿಗರನ್ನು ಕರೆತರುವ ಪ್ರಯತ್ನ ಮಾಡಲಿದೆ ಎಂದರು.