ಮಂಗಳೂರು: ಉಕ್ರೇನ್ನಿಂದ ವಾಪಾಸ್ ಬಂದ ವಿದ್ಯಾರ್ಥಿಗಳನ್ನು ಕೇಳಿದರೆ ಅಲ್ಲಿ ಎದುರಿಸಿದ ಕಷ್ಟ ಏನು ಎಂದು ಗೊತ್ತಾಗುತ್ತೆ. ವಿದ್ಯಾರ್ಥಿಗಳು ಜೀವದ ಹಂಗು ತೊರೆದು ಬಾರ್ಡರ್ಗೆ ಬಂದು ಸೇರಿದ್ದಾರೆ. ಆದರೆ ಸರ್ಕಾರ ನಾವೇ ಕರೆದುಕೊಂಡು ಬಂದಿರುವುದಾಗಿ ಫೋಸ್ ಕೊಡುತ್ತಿದೆ ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ರಾತ್ರಿ ಹಗಲಿನ ನಡುವೆ ನಿರ್ಧಾರವಾಗಿಲ್ಲ. ಒಂದು ತಿಂಗಳ ಮೊದಲೇ ಯುದ್ದ ಆಗುತ್ತೆ ಎಂದು ಗೊತ್ತಿದ್ದರೂ ಮೊದಲೇ ಮಕ್ಕಳ ರಕ್ಷಣೆಗೆ ಯಾಕೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ? ಇತರೆ ದೇಶದವರಿಗೆ ಉಕ್ರೇನ್ನಿಂದ ಹೊರಬರಲು ಸುರಕ್ಷಿತ ದಾರಿ ಸಿಕ್ಕಿದೆ. ಆದರೆ ಭಾರತಕ್ಕೆ ಇದು ಸಾಧ್ಯವಾಗಿಲ್ಲ. ಯಾಕೆಂದರೆ ಬೇರೆ ದೇಶದವರ ಜೊತೆ ನಮ್ಮ ಸಂಬಂಧ ಚೆನ್ನಾಗಿಲ್ಲ ಎಂದರು.
ರಾಜತಾಂತ್ರಿಕತೆ, ವಿದೇಶಾಂಗ ವ್ಯವಹಾರದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದು ಆಚಾರದ ಸರ್ಕಾರವಲ್ಲ. ಕೇವಲ ಪ್ರಚಾರದ ಸರ್ಕಾರ. ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ವಿಫಲ ಆಗಿದೆ. ಪ್ರಧಾನಮಂತ್ರಿ ಒಂದು ಪೋನ್ ಮಾಡಿದರೆ ಯುದ್ದ ನಿಲ್ಲುತ್ತದೆಯಂತೆ. ಆದರೆ ಈಗ ಯಾಕೆ ಯುದ್ದ ನಿಂತಿಲ್ಲ? ಎಂದು ವ್ಯಂಗ್ಯ ಮಾಡಿದ್ದಾರೆ.