ಮೂಡಬಿದಿರೆ: ಮಹಿಳೆಯರು ಸಬಲರಾಗಬೇಕು ದುರ್ಬಲರಾಗಬಾರದೆಂಬ ಎಂಬ ಉದ್ದೇಶದಿಂದ ಸರ್ಕಾರ ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮೂಡಬಿದಿರೆಯ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ತಿಳಿಸಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ, ಜಿಲ್ಲಾ ಕೌಶಲ್ಯಾ ಮಿಶನ್ ಮಂಗಳೂರು ಹಾಗೂ ಮೂಡಬಿದಿರೆ ಪುರಸಭೆ ಸಹಯೋಗದಲ್ಲಿ ಡೇ ನಲ್ಮ್ ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಸಾಮರ್ಥ್ಯ ಅಭಿವೃದ್ಧಿ ತರಭೇತಿ ಕಾರ್ಯಾಗಾರವು ಮೂಡಬಿದರೆಯ ಸಮಾಜಮಂದಿರದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಸಾದ್ ಕುಮಾರ್ ಮಾತಾಡಿ ಸಾಲ ಸೌಲಭ್ಯ ಹಾಗೂ ಹತ್ತು ಸಾವಿರದ ಸುತ್ತು ನಿಧಿಯ ಯೋಜನೆಯನ್ನು ಸರಿಯಾಗಿ ಅದರ ಮರುಪಾವತಿಯನ್ನು ಮಾಡಿದ್ದಲ್ಲಿ ಮುಂದಿನ ಹಂತದಲ್ಲಿ 50 ಸಾವಿರದಷ್ಟು ಸುತ್ತು ನಿಧಿಯನ್ನು ಪಡೆದುಕೊಳ್ಳಬಹುದು ಎಂದರು.
ಕೌಶಲ್ಯಾಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕಿ ಐರಿನ್ ರೆಬೆಲ್ಲೋ ಮಾತಾಡಿ ನಗರದ ಬಡ ಜನರ ಅಭಿವೃದ್ಧಿಗಾಗಿ ಡೇ ನಲ್ಮ್ ಯೋಜನೆ ಜಾರಿಗೊಂಡಿದ್ದು, ಸಾಮಾಜಿಕ ಕ್ರೋಢಿಕರಣ ಮತ್ತು ಸಾಂಸ್ಥಿಕ ಅಭಿವೃದ್ಧಿಯ ಉಪಘಟಕದಡಿ ಮಹಿಳೆಯರ ಸ್ವಸಹಾಯ ಸಂಘಗಳನ್ನು ರಚಿಸಿಸಲಾಗಿದೆ. ಅವರ ಸಾಮರ್ಥ್ಯವನ್ನು ಹೆಚ್ಚಿಸಿ, ಉಳಿತಾಯವನ್ನು ಮಾಡಿ ಆಂತರಿಕ ಸಾಲವನ್ನು ಮಾಡುವ ಮೂಲಕ ತನ್ನ ಕುಟುಂಬದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಮಹಿಳೆಯರಿಗೆ ಈ ಯೋಜನೆಯ ಮೂಲಕ ಸುತ್ತು ನಿಧಿಯನ್ನು ನೀಡಲಾಗುತ್ತಿದೆ. ತಮ್ಮ ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಲು ಈ ಸ್ವಸಹಾಯ ಸಂಘಗಳು ಬೆಂಬಲವಾಗಿ ಕೆಲಸ ಮಾಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಇಂದು, ಸ್ಥಾಯಿ ಸಮಿತಿ ಅಧ್ಯಕ್ಷ ನಾಗಾರಾಜ್ ಪೂಜಾರಿ, ಪುರಸಭೆ ಸದಸ್ಯ ವಿಶ್ವನಾಥ್, ಒಕ್ಕೂಟದ ಅಧ್ಯಕ್ಷೆ ಎಸ್ ರೇಖಾ, ಉಪಾಧ್ಯಕ್ಷೆ ಪೂರ್ಣಿಮಾ, ಸಮುದಾಯ ಸಂಘಟನಾಧಿಕಾರಿಗಳಾದ ಮುರಳೀಧರ್ ಮತ್ತು ಗೋಪಾಲ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.