ಮಂಗಳೂರು: ವಿದ್ಯಾರ್ಥಿನಿಯರ ಹಿತ ಕಡೆಗಣಿಸಿ ಸರ್ಕಾರ ಸಂಘಪರಿವಾರದ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಸಂಘಪರಿವಾರ ಮಹಿಳಾ ಮತ್ತು ಪ್ರತಿಗಾಮಿ ಕೂಟವಾಗಿದೆ. ನಮ್ಮ ಸಾಕ್ಷರತೆ ಪ್ರಮಾಣ ಇಳಿಸಲು ಸಂಘಪರಿವಾರ ಹಿಜಾಬ್ ವಿವಾದ ಎಬ್ಬಿಸಿದೆ ಎಂದು ನ್ಯಾಷನಲ್ ವುಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ಫರ್ಝಾನಾ ಮುಹಮ್ಮದ್ ಹೇಳಿದರು.
ಹಿಜಾಬ್ ಪ್ರಕರಣದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ನೀಡಿದೆ. ಈ ಹಿನ್ನಲೆಯಲ್ಲಿ ಮಂಗಳೂರಿನಲ್ಲೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತೀರ್ಪು ಸಂವಿಧಾನ ನಮಗೆ ಕೊಟ್ಟ ಹಕ್ಕನ್ನು ಕಸಿದುಕೊಂಡಿದೆ. ಇದರಿಂದ ಮುಸ್ಲಿಂ ಸಮುದಾಯಕ್ಕೆ ತುಂಬಾ ನೋವುಂಟಾಗಿದೆ. ಈ ತೀರ್ಪು ಸಂಘ ಪರಿವಾರಕ್ಕೆ ಮಾತ್ರ ಖುಷಿ ಕೊಟ್ಟಿದೆ. ತೀರ್ಪಿಗಾಗಿ ಕಾದಿದ್ದ ಹೆಣ್ಣು ಮಕ್ಕಳಿಗೆ ಯಾವುದೇ ನ್ಯಾಯ ಸಿಕ್ಕಿಲ್ಲ. ಆ ಹೆಣ್ಣುಮಕ್ಕಳ ಪರವಾಗಿ ನಮ್ಮ ಸಂಘಟನೆ ಅವರ ಬೆಂಬಲಕ್ಕೆ ನಿಲ್ಲುತ್ತದೆ ಎಂದರು.
ಧಾರ್ಮಿಕ ಸ್ವಾತಂತ್ರ್ಯದ ಜೊತೆ ಶಿಕ್ಷಣ ಪಡೆಯಿರಿ ಎಂದು ನಾವು ಅವರಿಗೆ ಹೇಳುತ್ತೇವೆ. ನಾವು ಅವರಿಗೆ ಮುಂದೆಯೂ ಕಾನೂನು ಹೋರಾಟ ಮಾಡಲು ಬೆಂಬಲಿಸುತ್ತೇವೆ. ಧಾರ್ಮಿಕ ಸ್ವಾತಂತ್ರ್ಯದ ಜೊತೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟರೆ ಅವರು ಬರೆಯಲಿ. ಪರೀಕ್ಷೆ ಬರೆಯಲು ಅವಕಾಶ ಸಿಗದೇ ಅವರು ಹೊರಗೆ ಬಂದರೆ ಅವರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ಅವರು ಪ್ರತಿಭಟಿಸದೇ ಇದ್ದಲ್ಲಿ ಮುಂದೆ ಬೇರೆ ಹಕ್ಕನ್ನು ಕಸಿದುಕೊಳ್ಳಬಹುದು. ಮೂವರು ನ್ಯಾಯಮೂರ್ತಿಗಳ ತೀರ್ಪು ಸಂವಿಧಾನಿಕ ಹಕ್ಕಿದ ವಿರುದ್ಧವಾಗಿದೆ ಎಂದು ಫರ್ಝಾನಾ ಮುಹಮ್ಮದ್ ಹೇಳಿದರು.