ಕಾರ್ಕಳ: ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆಂದು ಬೆಳ್ಮಣ್ ಸರ್ಕಾರಿ ಪಪೂ ಕಾಲೇಜಿನ ಪ್ರಾಂಶುಪಾಲರಿಗೆ ಹುಸಿ ಕರೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಳ್ಮಣ್ ಸರ್ಕಾರಿ ಪಪೂ ಕಾಲೇಜಿನ ಪ್ರಾಂಶುಪಾಲ ವಿಷ್ಣುಮೂರ್ತಿ ಮಯ್ಯ ಅವರಿಗೆ ಮಾ.30ರಂದು ಅಪರಿಚಿತ ಮಹಿಳೆಯು ತಾನು ಪಿ.ಯು. ಮಂಡಳಿಯ ಪರೀಕ್ಷಾ ವಿಭಾಗದಿಂದ ಕರೆ ಮಾಡುತ್ತಿರುವುದಾಗಿ ಹೇಳಿದ್ದಾಳೆ. ಮಾ. 31ರಂದು ನಡೆಯುವ ಬಯೋಲಜಿ ಪ್ರಶ್ನೆಪತ್ರಿಕೆ, ಉಳಿದ ಇಂಗ್ಲೀಷ್, ವಿಜ್ಞಾನ ಪ್ರಶ್ನೆಪತ್ರಿಕೆಯೂ ಸೋರಿಕೆ ಆಗಿದೆ. ನಿಮ್ಮಲ್ಲಿರುವ ಪ್ರಶ್ನೆಪತ್ರಿಕೆಗಳನ್ನು ಕ್ರಾಸ್ಚೆಕ್ ಮಾಡಲು ವಾಟ್ಸಾಪ್ ಮಾಡುವಂತೆ ತಿಳಿಸಿದ್ದಾಳೆ.
ಆಗ ಪ್ರಾಂಶುಪಾಲ ವಿಷ್ಣುಮೂರ್ತಿ ಮಯ್ಯ ಅವರು ಕರೆ ಮಾಡಿದ ಮಹಿಳೆಯ ಹೆಸರು ವಿಚಾರಿಸಿದ್ದಾರೆ. ಆದರೆ ತನ್ನ ಹೆಸರನ್ನು ಹೇಳದೆ ಕರೆಯನ್ನು ಕಟ್ ಮಾಡಿದ್ದಾಳೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.