ಉಡುಪಿ: ಕೆ.ಕೃಷ್ಣಮೂರ್ತಿ ಅಭಿಮಾನಿ ಬಳಗ ಉಡುಪಿ ಜಿಲ್ಲೆ, ಯಶೋಧ ಆಟೋ ಯೂನಿಯನ್ ಮತ್ತು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇದರ ಸಹಯೋಗದೊಂದಿಗೆ ಭಾನುವಾರ ಮಥುರಾ ಕಂಫರ್ಟ್ಸ್ ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೆಡ್ ಕ್ರಾಸ್ ಕುಂದಾಪುರ ವಿಭಾಗದ ಸಭಾಪತಿ ಜಯಕರ ಶೆಟ್ಟಿ ಅವರು ಕೊರೊನಾ ಮತ್ತು ವಿವಿಧ ಕಾರಣಗಳಿಂದ ಎಲ್ಲಾ ಕಡೆ ರಕ್ತದ ಕೊರತೆ ಉಂಟಾಗಿದೆ. ಆದ್ದರಿಂದ ಕೃಷ್ಣ ಮೂರ್ತಿ ಆಚಾರ್ಯ ಅವರು ಸರಿಯಾದ ಸಮಯದಲ್ಲಿಈ ಬೃಹತ್ ರಕ್ತದಾನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಇಂತಹ ಶಿಬಿರಕ್ಕೆ ಅನೇಕರ ಸಹಕಾರದ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಮಾತನಾಡಿ, ಸಮಾಜ ಬೇರೆ ಬೇರೆ ಸ್ಥರಗಳಲ್ಲಿ ಎಷ್ಟೇ ಬೆಳೆದಿದ್ದರೂ ಕೃತಕ ರಕ್ತ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಯುವಕರನ್ನು ಒಟ್ಟುಗೂಡಿಸಿ ಇಂತಹ ಸಮಾಜ ಸೇವೆ ಮಾಡುವುದು ಶ್ರೇಷ್ಠ ಕಾರ್ಯ ಎಂದರು.
ಪ್ರಕಾಶ್ ಸೈಮಂಡ್, ಉಪನ್ಯಾಸಕ ಬಾಲಕೃಷ್ಣ ಮುದ್ದೋಡಿ, ಅಮೃತಾ ಕೃಷ್ಣಮೂರ್ತಿ, ಕಡೆಕಾರ್ ಪಂ. ಅಧ್ಯಕ್ಷ ನವೀನ್ ಶೆಟ್ಟಿ, ಯುವರಾಜ್, ದಯಾನಂದ ಕಪ್ಪೆಟ್ಟು, ಸತೀಶ್ ಮಣಿಪಾಲ, ಸೌರಭ್ ಬಲ್ಲಾಳ್, ಉದಯ್, ಚರಣ್ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೂರಾರು ಮಂದಿ ರಕ್ತದಾನಿಗಳು ಭಾಗವಹಿಸಿದ್ದರು. ಸಮಾಜ ಸೇವಕ, ಸಂಘಟಕ ಕೆ.ಕೃಷ್ಣಮೂರ್ತಿ ಆಚಾರ್ಯ ಸ್ವಾಗತಿಸಿ, ವಿಶಾಲ ಶೆಟ್ಟಿ ನಿರೂಪಿಸಿದರು.