ಸಾಮಾನ್ಯವಾಗಿ ನಮಗೆ ಕಾಯುವುದೆಂದರೆ ಕೋಪ ತರಿಸುತ್ತದೆ. ಶಬರಿ ಕಾಯುವುದರಲ್ಲಿ ನಮಗೆ ನಿದರ್ಶನ. ಶಬರಿಯು ರಾಮನಿಗಾಗಿ ಕಾದರೆ ಈ ಪಕ್ಷಿ ಮಳೆ ನೀರಿಗಾಗಿ ಕಾಯುತ್ತದೆ. ಮಳೆ ನೀರೇ ಯಾಕೆ ಕೆರೆ, ಸರೋವರಗಳಲ್ಲಿ ನೀರಿದೆಯಲ್ಲ ಎನ್ನಬಹುದು. ಆದರೆ ಈ ಪಕ್ಷಿ ಮಳೆ ನೀರಿನ ಹೊರತಾಗಿ ಬೇರೆ ಯಾವ ನೀರನ್ನು ಕುಡಿಯುವುದಿಲ್ಲ. ನೀರು ಎಷ್ಟೇ ಶುದ್ಧವಾಗಿದ್ದರೂ ಕುಡಿಯದೇ ಮಳೆ ನೀರಿಗಾಗಿಯೇ ಕಾಯುತ್ತದೆ.
ಮಳೆ ವರ್ಷ ಪೂರ್ತಿ ಬರುವುದಿಲ್ಲ ಪಕ್ಷಿಗೆ ಬಾಯಾರಿಕೆ ಆಗುವುದಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಹೌದು ಪಕ್ಷಿಗೆ ಎಷ್ಟೇ ಬಾಯಾರಿಕೆ ಆದರೂ ಸಾಯುವ ಸ್ಥಿತಿ ಬಂದರೂ ಮಳೆ ನೀರು ಬಿಟ್ಟು ಬೇರೇನೂ ಕುಡಿಯುವುದಿಲ್ಲ. ಆ ಪಕ್ಷಿಗೆ ಅದೆಷ್ಟು ಹಠ ಇದೆ ಅನ್ನಿಸಬಹುದು. ಇಷ್ಟೆಲ್ಲಾ ಹಠ, ಸ್ವಾಭಿಮಾನ ಇರುವ ಪಕ್ಷಿ ಜಾಕೋಬಿನ್ ಕೋಗಿಲೆ. ಇದು ಕೇವಲ ಮಳೆ ನೀರಿನಿಂದ ತನ್ನ ದಾಹವನ್ನು ನೀಗಿಸಿಕೊಳ್ಳುತ್ತದೆ.
ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿ ಮಾತ್ರ ಕಂಡುಬರುವ ಜಾಕೋಬಿನ್ ಕೋಗಿಲೆ ಭಾರತದ ಉತ್ತರಾಖಂಡದಲ್ಲಿ ಕಂಡುಬರುತ್ತದೆ. ಉತ್ತರಾಖಂಡದ ಗರ್ವಾಲ್ ನಲ್ಲಿ ಈ ಪಕ್ಷಿಗೆ ಚೋಲಿ ಎಂದು ಕರೆಯುತ್ತಾರೆ. ಗಡ್ವಾಲ್ ಜನರ ಪ್ರಕಾರ ಯಾವಾಗಲೂ ಆಕಾಶದತ್ತ ನೋಡುತ್ತಲೇ ಇರುತ್ತದೆ. ದಾಹವಾದರೆ ಸಾಯುತ್ತದೆ ಹೊರತಾಗಿ ತಪ್ಪಿಯೂ ಕೆರೆ, ಸರೋವರದ ನೀರನ್ನು ಕುಡಿಯುವುದಿಲ್ಲ. ಈ ಕೋಗಿಲೆಯನ್ನು ಮಾರ್ವಾಡಿಯಲ್ಲಿ ಮಗ್ವಾ ಮತ್ತು ಪಾಪಿಯಾ ಎಂದು ಕರೆಯುತ್ತಾರೆ. ವಿಶೇಷವೆಂದರೆ ಜಾಕೋಬಿನ್ ಕೋಗಿಲೆ ಮಳೆಯಲ್ಲೂ ನಿರ್ದಿಷ್ಟವಾಗಿ ಸ್ವಾತಿ ನಕ್ಷತ್ರದಲ್ಲಿ ಬರುವ ಮಳೆ ನೀರನ್ನು ಮಾತ್ರ ಕುಡಿಯುತ್ತದೆ ಎಂದು ಹೇಳಲಾಗುತ್ತದೆ. ಒಟ್ಟಾರೆ ಸಾಯುವಷ್ಟು ದಾಹವಾದರೂ ಮಳೆ ನೀರಿಗಾಗಿಯೇ ಶಬರಿಯಂತೆ ಕಾಯುತ್ತದೆ ಈ ಪಕ್ಷಿ.
ಅಕ್ಷತಾ – ನ್ಯೂಸ್ ಪ್ಲಸ್ ಡೆಸ್ಕ್