ಹಕ್ಕಿಗಳ ಲೋಕವೇ ಒಂದು ವಿಸ್ಮಯ. ಅವುಗಳ ವಿಶಾಲವಾದ ಪ್ರಪಂಚದಲ್ಲಿ ಎಲ್ಲಿಲ್ಲದೆ ಸ್ವಚ್ಛಂದವಾಗಿ ಜೊತೆ ಜೊತೆಯಾಗಿಯೇ ಹಾರಾಡುತ್ತಿರುತ್ತವೆ. ನಮ್ಮ ಪರಿಸರದಲ್ಲೂ ನಾನಾ ವಿಧದ ಪಕ್ಷಿಗಳು ಪರಿಸರ ಮಾಲಿನ್ಯ ಹಾಗೂ ಮಾನವ ಸೇರಿದಂತೆ ಇತರ ಜೀವಿಗಳು ನೀಡುವ ಉಪಟಳದ ನಡುವೆ ತಮ್ಮ ಸಂತತಿಯನ್ನು ಉಳಿಸಿಕೊಂಡು ಬರುತ್ತಿತ್ತು. ಆದರೆ ಈಗಿನ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದೆ. ಪಕ್ಷಿಗಳ ಸಂತಾನಾಭಿವೃದ್ಧಿ ಗಣನೀಯವಾಗಿ ಕುಂದುತ್ತಿದೆ. ಅವುಗಳಲ್ಲೂ ನೀರು ಕಾಗೆಗಳು ಅಳಿವಿನಂಚಿನಲ್ಲಿವೆ.
ನೀರ ಹಕ್ಕಿಯ ಕುರಿತು ಒಂದಿಷ್ಟು:
ನೀರು ಕಾಗೆಗಳ ಅಳಿವಿನ ಕುರಿತು ತಿಳಿಯಬೇಕಾದರೆ ಮೊದಲು ಈ ನೀರು ಕಾಗೆಗಳ ಕುರಿತ ಮಾಹಿತಿ ತಿಳಿದುಕೊಳ್ಳುವುದು ಪ್ರಮುಖವಾಗಿದೆ. ಕಪ್ಪಾಗಿದೆ ಅನ್ನುವ ಕಾರಣಕ್ಕಾಗಿಯೇ ಈ ಹಕ್ಕಿಯನ್ನು ನೀರು ಕಾಗೆ ಎಂದು ಕರೆಯಲಾಗಿದೆ. ಹೆಸರೇ ಹೇಳುವಂತೆ ಇದು ನೀರ ಹಕ್ಕಿ. ಇಂಗ್ಲೀಷ್ ನಲ್ಲಿ ಈ ಹಕ್ಕಿಯನ್ನು ಕಾರ್ಮೊರೆಂಟ್ಸ್ ಎಂದು ಕರೆಯಲಾಗುತ್ತದೆ. ಭಾರತದ ಉಪಖಂಡದಲ್ಲಿ ನಾಲ್ಕು ಹಾಗೂ ಒಟ್ಟು ಜಗತ್ತಿನಲ್ಲಿ ಸುಮಾರು ನಲವತ್ತು ಬಗೆಯ ನೀರು ಕಾಗೆಗಳಿವೆ. ನೀರು ಕಾಗೆಗಳ ಪ್ರಮುಖ ಆಹಾರ ಮೀನು.
ಇವು ಮುಳುಗು ಹಕ್ಕಿಗಳಾಗಿದ್ದು, ನೀರಿನಲ್ಲಿ ಮುಳುಗಿಯೇ ಮೀನುಗಳನ್ನು ಹಿಡಿಯುತ್ತದೆ. ಹಿಡಿದ ಮೀನುಗಳು ಬಾಯಿಯಿಂದ ತಪ್ಪಿ ಹೋಗದಂತೆ ಅವುಗಳ ಕೊಕ್ಕುಗಳು ಗರಗಸದಂತೆ ಹರಿತವಾಗಿರುತ್ತದೆ. ಜಪಾನಿನಲ್ಲಿ ಈ ನೀರು ಕಾಗೆಗಳನ್ನೇ ಇಟ್ಟು ಮೀನುಗಳನ್ನು ಹಿಡಿಯಲಾಗುತ್ತದೆ. ಹಾಗೂ ಅವುಗಳು ಆ ಮೀನುಗಳನ್ನು ನುಂಗದಂತೆ ಉಂಗುರವನ್ನು ತೊಡಿಸಲಾಗುತ್ತದೆ. ಈ ಹಕ್ಕಿಗಳು ಮೀನು ಹಿಡಿದು ದಡಕ್ಕೆ ಬಂದಾಗ ಅವುಗಳ ಬಾಯಿಯಿಂದ ಮೀನನ್ನು ಕಸಿದು ಮತ್ತೇ ನೀರಿಗೆ ಬಿಡಲಾಗುವುದು ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ನೀರು ಕಾಗೆಗಳ ಮರಿಗಳ ಹೊಟ್ಟೆಯ ಭಾಗ ಬೆಳ್ಳಗಾಗಿರುತ್ತದೆ. ಪ್ರೌಢ ಹಕ್ಕಿಗಳ ಕೊಕ್ಕು ಹಾಗೂ ಅದರ ಸುತ್ತಲ ಭಾಗ ಬಿಟ್ಟು ಸಂಪೂರ್ಣವಾಗಿ ಕಪ್ಪು ಬಣ್ಣದ್ದಾಗಿರುತ್ತದೆ. ಕೊಕ್ಕು ಕಿತ್ತಳೆ ಬಣ್ಣವನ್ನು ಹೊಂದಿದ್ದು, ಮೇಲ್ಕೊಕ್ಕಿನ ತುದಿ ಕೊಕ್ಕೆಯಂತೆ ಬಾಗಿ ಇರುತ್ತದೆ. ಭಾರತದಲ್ಲಿ ಕೆಲವೆಡೆ ಇವು ನಿವಾಸಿ ಹಕ್ಕಿಗಳಾದರೆ ಇನ್ನು ಕೆಲವೆಡೆ ಚಳಿಗಾಲದಲ್ಲಿ ವಲಸೆ ಬರುತ್ತವೆ. ಇವು ದಂಡೆಯ ಮೇಲೆ ತಮ್ಮ ರೆಕ್ಕೆಗಳನ್ನು ಅಗಲಿಸಿಕೊಂಡು ಕುಳಿತಿರುತ್ತವೆ. ಹಾಗೆಯೇ ಇವು ನೀರಿನಲ್ಲೂ ಹೆಚ್ಚು ಸಮಯ ಕಳೆಯುವಂತಹ ಹಕ್ಕಿಗಳಾಗಿವೆ. ಇವು ಉತ್ತಮ ಹಾರಾಟದ ಹಕ್ಕಿಗಳಾಗಿದ್ದು, ಇತರ ಹಕ್ಕಿಗಳಂತೆ ಮರಗಳಲ್ಲಿ ಗೂಡುಗಳನ್ನು ಕಟ್ಟಿ ವಾಸಿಸುತ್ತವೆ.
ನೀರು ಕಾಗೆಯ ಅಳಿವಿಗೆ ಕಾರಣಗಳು:


ಸಾಮಾನ್ಯವಾಗಿ ನಮ್ಮ ಕರಾವಳಿ ಪ್ರದೇಶಗಳಲ್ಲೂಈ ನೀರು ಕಾಗೆಗಳು ಕಂಡು ಬರುತ್ತವೆ. ನಮ್ಮ ಪರಿಸರದಲ್ಲಾಗಿರುವ ಬದಲಾವಣೆಗಳೇ ಇವುಗಳ ಅಳಿವಿಗೂ ಕಾರಣವಾಗುತ್ತಿದೆ. ಹೆಚ್ಚಾಗಿರುವ ಪರಿಸರ ಮಾಲಿನ್ಯ, ಸ್ಮಾರ್ಟ್ ಸಿಟಿ ಎನ್ನುವ ಹೆಸರಿನಲ್ಲಿ ಮರಗಳನ್ನು ಕಡಿದು ಕಟ್ಟಡ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ಮೊಬೈಲ್ ರೇಡಿಯೇಷನ್ಸ್ ಹಾಗೆ ನಗರೀಕರಣ ಹೆಚ್ಚಾದಂತೆ ಇಂತಹ ಪಕ್ಷಿಗಳು ತಮಗೆ ಜೀವಿಸುವ ಹಕ್ಕುಗಳನ್ನು ಕಳೆದುಕೊಳ್ಳುತ್ತಿವೆ. ಹೆಚ್ಚಾಗಿ ಮರಗಳಲ್ಲೇ ಗೂಡು ಕಟ್ಟಿ ವಾಸಿಸುವ ಈ ಹಕ್ಕಿಗಳಿಗೆ ಮರಗಳನ್ನು ಕಡಿದ ಹಿನ್ನಲೆ ತಮಗೆ ನೆಲೆ ಇಲ್ಲದಂತಾಗುತ್ತಿದೆ.
ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಈ ನೀರು ಕಾಗೆಗಳು ಮೊಟ್ಟೆ ಇಡುತ್ತಿದ್ದು, ಈ ಮರಿಗಳು ಫೆಬ್ರವರಿ ವೇಳೆ ಹಾರಲು ಸಿದ್ಧವಾಗಿರುತ್ತದೆ. ಈ ನಡುವೆ ಮರಗಳನ್ನು ಕಡಿದು ಹಾಕಿದ ಪರಿಣಾಮ ಈ ಮೊಟ್ಟೆಗಳು ನಶಿಸಿ ಹೋಗುತ್ತಿವೆ. ಹಾರಲು ಸಿದ್ಧವಾಗುವ ಮುಂಚೆ ಮರಿಗಳು ತಮ್ಮ ಜೀವವನ್ನು ಕಳೆದುಕೊಳ್ಳುತ್ತಿವೆ. ಹೀಗೊಂದು ಪ್ರಕರಣ ಮಣಿಪಾಲದಲ್ಲಿ ನಡೆದಿದೆ.


ಮರವೂ ಇಲ್ಲ: ಆಹಾರವೂ ಇಲ್ಲ:
ಮಣಿಪಾಲದಲ್ಲಿ ಎನ್ ಎಚ್ 16 9ಎ ರಸ್ತೆ ನಿರ್ಮಾಣದ ವೇಳೆ ಎಷ್ಟೋ ಮರಗಳನ್ನು ಕಡಿದ ಹಿನ್ನಲೆ ನೀರು ಕಾಗೆಗಳ ಸಂತಾನವೇ ಹಾಳಾಗಿದೆ. ಯಾಕೆಂದರೆ ಈ ಸಂದರ್ಭದಲ್ಲಿ ಆ ಮರಗಳಲ್ಲಿದ್ದ ನೀರು ಕಾಗೆಗಳ ಎಷ್ಟೋ ಗೂಡುಗಳು, ಅವುಗಳಲ್ಲಿದ್ದ ಮೊಟ್ಟೆಗಳು ನಶಿಸಿ ಹೋದವು. ಉಳಿದಂತೆ ಮರಿಗಳಿಗೆ ಗೂಡುಗಳು ಹಾಗೂ ತಾಯಿಯ ಆರೈಕೆ ಇಲ್ಲದೆ ಅವುಗಳೂ ನಾಶವಾದವು. ಅದೂ ಅಲ್ಲದೆ ನೀರಿನಲ್ಲೇ ಇರುವ ಮೀನುಗಳನ್ನೇ ಆಹಾರವಾಗಿ ಅವಲಂಭಿಸಿರುವ ಈ ನೀರು ಕಾಗೆಗಳಿಗೆ ಬೇಕಾದ ಆಹಾರವೂ ಸಿಗದಂತಾಯಿತು. ಎಲ್ಲೆಡೆ ತಲೆ ಎತ್ತಿರುವ ಕಾರ್ಖಾನೆಗಳು, ಆಸ್ಪತ್ರೆ ಸೇರಿದಂತೆ ವಿವಿಧೆಡೆಯಿಂದ ಹೊರಬರುವ ಕಲುಷಿತ ನೀರು ನದಿಗಳಿಗೆ ಸೇರಿ ಮಲಿನಗೊಳ್ಳುತ್ತಿರುವುದರಿಂದ ಇವುಗಳು ಆಹಾರಕ್ಕಾಗಿ ಅಲೆದಾಡುವಂತಾಗಿದೆ. ತಮಗೆ ಬೇಕಾದ ಆಹಾರವೂ ಸಿಗದೆ ಎಷ್ಟೋ ನೀರು ಕಾಗೆಗಳು ಜೀವ ಕಳೆದುಕೊಂಡವು.
ಕಾಣದಂತೆ ಮಾಯವಾದವು:
ಒಂದು ಕಾಲದಲ್ಲಿ ನಮ್ಮ ಸುತ್ತಮುತ್ತಲು ನಾವಿರುವ ಪ್ರದೇಶದಲ್ಲೇ ಸ್ವಚ್ಛಂದವಾಗಿ ತಮ್ಮದೇ ಲೋಕದಲ್ಲಿ ಹಾರಾಡುತ್ತಿದ್ದ ಈ ನೀರು ಕಾಗೆಗಳು ಈಗ ನಮ್ಮ ಕಣ್ಣಿಗೆ ಕಾಣದಂತೆ ಮಾಯವಾಗುತ್ತಿವೆ. ನಮ್ಮ ಸ್ವಾರ್ಥಕ್ಕಾಗಿ ಪರಿಸರದ ನಿಯಮಗಳನ್ನು ಪಾಲಿಸದೆ ಅಭಿವೃದ್ಧಿಯ ಹೆಸರಲ್ಲಿ ನಮ್ಮ ಪರಿಸರವನ್ನು ನಾವೇ ಹಾಳು ಮಾಡುತ್ತಿದ್ದೇವೆ. ಇದರ ಫಲಿತಾಂಶವೆಂಬಂತೆ ನಮ್ಮ ಸುತ್ತಮುತ್ತ ಇರುವ ಪ್ರಾಣಿ ಪಕ್ಷಿಗಳು ಜೀವಿಸುವ ಹಕ್ಕನ್ನು ಕಳೆದುಕೊಳ್ಳುತ್ತಿದೆ. ನಮ್ಮ ಹಾಗೆ ಈ ಪರಿಸರದಲ್ಲಿ ಅವುಗಳಿಗೂ ಬದುಕುವ ಹಕ್ಕಿದೆ. ಆ ಹಕ್ಕನ್ನು ನಾವು ಹೇಗೆ ಕಸಿದುಕೊಳ್ಳಲು ಸಾಧ್ಯ? ಮಾನವರಾದ ನಾವು ಪರಿಸರದ ನಿಯಮಗಳನ್ನು ಪಾಲಿಸದೇ ಹೀಗೆ ಮುಂದುವರಿದರೆ ಮುಂಬರುವ ಭೀಕರ ದುರಂತಕ್ಕೆ ನಾವೇ ಕಾರಣಕರ್ತರಾಗುತ್ತೇವೆ. ಹೀಗೆ ಆದಲ್ಲಿ ನಮ್ಮ ಯುವ ಪೀಳಿಗೆ ಇಂತಹ ಪ್ರಾಣಿ ಪಕ್ಷಿ, ಮರ-ಗಿಡಗಳನ್ನು ಫೋಟೋದಲ್ಲೇ ನೋಡುವ ಕಾಲ ಬರುವುದರಲ್ಲಿ ಸಂಶಯವಿಲ್ಲ.
ಪರಿಸರ ಕಾಪಾಡೋ ಹಕ್ಕಿಗಳನ್ನು ಪ್ರೀತಿಸೋಣ:
ಈಗಾಗಲೇ ನಮ್ಮ ಹಿಂದಿನ ಕಾಲದಲ್ಲಿ ಇದ್ದ ಪಕ್ಷಿಗಳು ಇದೀಗ ಕಣ್ಮರೆಯಾಗಿದೆ. ಹಲವು ವರ್ಷಗಳ ಹಿಂದೆ ಇದ್ದ ಪಕ್ಷಿಗಳು ಈಗ ಕಾಣಸಿಗುತ್ತಿಲ್ಲ. ಕಲುಷಿತಗಾಳಿ, ನೀರು, ರೇಡಿಯೇಷನ್ ನಿಂದ ಇದೀಗ ನೂರಾರು ಹಕ್ಕಿಗಳು ಅಳಿವಿನಂಚಿನಲ್ಲಿವೆ. ಸ್ವತಂತ್ರವಾಗಿ ಅವುಗಳ ಪಾಡಿಗೆ ಜೀವಿಸುವ ಹಕ್ಕಿಗಳನ್ನು ಜೀವಿಸಲು ಬಿಡದೆ ನಮ್ಮ ಸ್ವಾರ್ಥಕ್ಕೆ ಬಲಿ ಕೊಡುತ್ತಾ ಬಂದಿದ್ದೇವೆ. ಹಾಗಾಗಿ ಇಂಥ ಸ್ಥಿತಿಯಲ್ಲಿ ಪಕ್ಷಿ ವೀಕ್ಷಣೆ ಜೊತೆಗೆ ಪಕ್ಷಿಗಳ ಸಂರಕ್ಷಣೆಯೂ ನಮ್ಮೆಲ್ಲರ ಹೊಣೆಯಾಗಿದೆ. ಹಕ್ಕಿಗಳ ಅಳಿವು ಉಳಿವು ಎನ್ನುವುದು ನಮ್ಮ ಕೈಯಲ್ಲಿದೆ. ಈ ಹಕ್ಕಿಗಳ ಉಳಿವಿನಿಂದ ಪರಿಸರ ಹಾಗೂ ನಮ್ಮ ಉಳಿವು ಸಾಧ್ಯ.
–ಮೈಮುನ ಅಸ್ಲಾಂ (ನ್ಯೂಸ್ ಪ್ಲಸ್ ಡೆಸ್ಕ್)