ಬೆಳ್ತಂಗಡಿ: ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿಯೊಬ್ಬರನ್ನು ಶಾಸಕ ಹರೀಶ್ ಪೂಂಜಾ ಅವರ ಆದೇಶದ ಮೇರೆಗೆ ಬೀದರ್ ಗೆ ವರ್ಗಾವಣೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಅರಣ್ಯ ಸಂಚಾರಿದಳದ ಪ್ರಭಾರ ಅಧಿಕಾರಿ ಸಂಧ್ಯಾ ಸಚಿನ್ ಅವರು ಶಾಸಕ ಹರೀಶ್ ಪೂಂಜಾ ಅವರು ಮರಗಳ್ಳರಿಗೆ ಬೆಂಬಲ ನೀಡಿ ದ್ವೇಷದಿಂದ ವರ್ಗಾವಣೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಶಾಸಕ ಹರೀಶ್ ಪೂಂಜಾ ಅವರು ಸಂಧ್ಯಾ ಸಚಿನ್ ಅವರನ್ನು ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರ ವೈರಲ್ ಆಗಿದೆ. ಈ ಪತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹಿ ಮಾಡಿದ್ದಾರೆ.
ಸಂಧ್ಯಾ ಸಚಿನ್ ಅವರು ತನಗೆ ನ್ಯಾಯ ಒದಗಿಸಿಕೊಡಿ ಎಂದು ಬೆಳ್ತಂಗಡಿಯ ನಾರಾಯಣ ಗುರು ಸ್ವಾಮಿ ಸೇವಾ ಸಂಘಕ್ಕೆ ಪತ್ರ ಬರೆದಿದ್ದು, ಇದು ವೈಯಕ್ತಿಕ ದ್ವೇಷದಿಂದ ಏಕಪಕ್ಷೀಯ ಆದೇಶವಾಗಿದೆ. ಬೆಳ್ತಂಗಡಿಯ ಅಕ್ರಮ ಮರ ಸಾಗಾಟಗಾರರ ಮರಗಳನ್ನು ಹಾಗೂ ವಾಹನವನ್ನು ವಶಪಡಿಸಿಕೊಂಡ ಕಾರಣ ಶಾಸಕರು ದ್ವೇಷದಿಂದ ನನ್ನನ್ನು ವರ್ಗಾವಣೆ ಮಾಡಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.