ಮೂಡುಬಿದಿರೆ: ತುಳು ಭಾಷೆ, ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಪ್ರತಿಯೊಬ್ಬರು ಅರಿತುಕೊಳ್ಳಬೇಕು. ನಮ್ಮ ಮಕ್ಕಳಿಗೆ ತುಳು ಸಂಸ್ಕ್ರತಿಯ ಹಬ್ಬ ಆಚರಣೆಗಳ ಬಗ್ಗೆ ಮನೆಯಲ್ಲಿ ತಿಳಿಸಿಕೊಡಬೇಕು. ಆ ಮೂಲಕ ನಶಿಸುತ್ತಿರುವ ಸಂಸ್ಕ್ರತಿಯನ್ನು ಎತ್ತಿ ಹಿಡಿಯಬೇಕು ಎಂದು ತುಳು ಸಾಹಿತಿ, ಉಡಲ್ ತ್ರೈಮಾಸಿಕ ಪತ್ರಿಕೆಯ ಸಂಪಾದಕಿ ಜಯಂತಿ ಎಸ್.ಬಂಗೇರ ಹೇಳಿದರು.
ಅವರು ವಾಲ್ಪಾಡಿಯ ಸ.ಕಿ.ಪ್ರಾ. ಶಾಲೆ ಮಾಡದಂಗಡಿಯಲ್ಲಿ ಗ್ರಾಮೋತ್ಸವ ಸಮಿತಿ, ವಾಲ್ವಾಡಿ ಆಶ್ರಯದಲ್ಲಿ ಭಾನುವಾರ ನಡೆದ “ವಾಲ್ಪಾಡಿ ಗ್ರಾಮೋತ್ಸವ” ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ತುಳು ಸಂಸ್ಕೃತಿಯ ಕುರಿತು ಮಾತನಾಡಿದರು.
ಕಾರ್ಯಕ್ರಮವನ್ನು ಶ್ರೀ ರಾಜಂದೈವ ಮತ್ತು ಶ್ರೀ ಬೃಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಸತೀಶ್.ವಿ. ಶೆಟ್ಟಿ ಉದ್ಘಾಟಿಸಿದರು. ಗ್ರಾಮೋತ್ಸವ ಸಮಿತಿಯ ಅಧ್ಯಕ್ಷ ಆನಂದ್ ಕುದ್ಕೋಳಿ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಎಂ.ಎಂ.ಶರೀಫ್, ಕ್ರೈಸ್ತ ಮುಖಂಡ ಪ್ರವೀಣ್ ಮೆಂಡೋನ್ಸಾ, ಶಾಲೆಯ ಮುಖ್ಯ ಶಿಕ್ಷಕಿ ವಾಣಿಶ್ರೀ, ಕಲ್ಪನಾ ಮಹಿಳಾ ಮಂಡಳಿಯ ಅಧ್ಯಕ್ಷೆ ಜೆಸಿಂತಾ ಮತ್ತಿತರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬೆದ್ರ ಪತ್ರಿಕೆಯ ಸಂಪಾದಕ ಅಶ್ರಫ್ ವಾಲ್ಪಾಡಿ ಸ್ವಾಗತಿಸಿ, ಪ್ರಕಾಶ್ ನಿರ್ವಹಿಸಿ, ಸುಕನ್ಯಾ.ಎಂ ವಂದಿಸಿದರು.