ಕುಂದಾಪುರ: ಹಿಜಾಬ್ ಪ್ರಕರಣದ ಕುರಿತು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬಳಿಕ ಕುಂದಾಪುರ ತಾಲೂಕಿನಲ್ಲಿ ಮತ್ತೆ ಶಾಲಾ-ಕಾಲೇಜುಗಳು ಪುನರಾರಂಭಗೊಂಡಿದೆ. ಈ ಹಿನ್ನಲೆ ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಸಿದ್ಧಲಿಂಗಪ್ಪ ಅವರು ಬುಧವಾರ ಕುಂದಾಪುರಕ್ಕೆ ಭೇಟಿ ನೀಡಿ ಡಿವೈಎಸ್ಪಿ ಶ್ರೀಕಾಂತ್.ಕೆ. ಅವರಿಂದ ಮಾಹಿತಿ ಪಡೆದರು.
ಮೂವರು ವಿದ್ಯಾರ್ಥಿನಿಯರು ಹಾಜರು
ಕುಂದಾಪುರದ ಜೂನಿಯರ್ ಕಾಲೇಜಿನಲ್ಲಿ ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಹಿಜಾಬ್ ಹೋರಾಟದಲ್ಲಿ ಭಾಗಿಯಾಗಿದ್ದ ಪ್ರಥಮ ಪಿಯುಸಿ ವಿಭಾಗದ ವಿದ್ಯಾರ್ಥಿನಿಯರ ಪೈಕಿ ಇಂದು ಮೂವರು ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದು ಉಳಿದವರು ಗೈರಾಗಿದ್ದಾರೆ.
ಕಾಲೇಜಿನಲ್ಲಿ ಹಿಜಾಬ್ ತೆರವುಗೊಳಿಸಲು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿದ್ಯಾರ್ಥಿನಿಯರು ಅಲ್ಲಿ ಹಿಜಾಬ್ ಕಳಚಿಟ್ಟು ತರಗತಿಗೆ ಹಾಜಾರಾಗಿದ್ದಾರೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ತಯಾರಿಗಾಗಿ ರಜೆ ನೀಡಿರುವ ಹಿನ್ನೆಲೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗಿದ್ದರು. ಕುಂದಾಪುರದ ಜೂನಿಯರ್ ಕಾಲೇಜು ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.