ಉಡುಪಿ:ಕೊರೊನಾ ಸಮಯದಲ್ಲಿ ಮೊದಲ ಬಾರಿಗೆ ಉಡುಪಿಯ ಪರ್ಯಾಯವನ್ನು ನಡೆಸಲಾಗುತ್ತದೆ. ಎರಡು ವರ್ಷಕ್ಕೊಮ್ಮೆ ಬರುವ ಪರ್ಯಾಯ ಮಹೋತ್ಸವ ಜನವರಿ ೧೮ರಂದು ಬಹಳ ಸರಳವಾಗಿ ನಡೆಯಲಿದೆ. ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭ ಪರ್ಯಾಯವನ್ನು ಸಾಂಪ್ರದಾಯಕ್ಕೆ ಸೀಮಿತಿವಾಗಿ ಸರಳವಾಗಿ ನಡೆಸಲು ಆಡಳಿತ ಮಂಡಳಿ ನಿರ್ಧಾರ ಮಾಡಿದೆ ಎಂದು ವರದಿಯಾಗಿದೆ.
ಈ ಬಾರಿಯ ಪರ್ಯಾಯೋತ್ಸವ ಮೆರವಣಿಗೆ ಹಾಗೂ ಪರ್ಯಾಯ ದರ್ಬಾರ್ ಜನವರಿ ೧೮ರಂದು ಸರಳವಾಗಿ ನಡೆಸಲು ಶ್ರೀ ಕೃಷ್ಣಾಪುರ ಪರ್ಯಾಯೋತ್ಸವ ಸಮಿತಿ ಪ್ರಮುಖ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಮಿತಿಯ ಗೌರವಾಧ್ಯಕ್ಷ ಕೆ ಸೂರ್ಯನಾರಾಯಣ ಉಪಾಧ್ಯಾಯರು ಹಾಗೂ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಶನಿವಾರ ರಾತ್ರಿ ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಮಾತನಾಡಿದ ಶಾಸಕ ರಘುಪತಿ ಭಟ್ ಎರಡು ಕೊರೊನಾ ಲಸಿಕೆಯನ್ನು ಪಡೆದುಕೊಂಡವರಿಗೆ ಮಾತ್ರ ಉತ್ಸವದಲ್ಲಿ ಭಾಗವಹಿಸಲು ಅನುಮತಿಯನ್ನು ನೀಡಲಾಗಿದೆ. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಬಾರಿಯ ಪರ್ಯಾಯದಲ್ಲಿ ಸಾಂಪ್ರದಾಯಿಕ ಆಚರಣೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿದ್ದು, ಜನವರಿ ೧೭ರ ರಾತ್ರಿ ೯ಗಂಟೆಯ ನಂತರ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಹೇಳಿದರು.
ಇನ್ನು, ಪರ್ಯಾಯ ಮಹೋತ್ಸವವನ್ನು ವಿವಿಧ ಟಿ.ವಿ ವಾಹಿನಿಗಳ ಮುಖಾಂತರ ನೇರಪ್ರಸಾರ ಮಾಡಲಾಗುತ್ತದೆ. ಭಕ್ತಾಧಿಗಳು ನೇರವಾಗಿ ಪರ್ಯಾಯಕ್ಕೆ ಬರುವ ಬದಲಾಗಿ ಟಿ.ವಿ ಮಾಧ್ಯಮಗಳ ಮೂಲಕ ಉತ್ಸವ ವೀಕ್ಷಣೆ ಮಾಡುವುದರ ಮುಖಾಂತರ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು. ಪರ್ಯಾಯ ದರ್ಬಾರ್ ಸಭೆಯಲ್ಲಿಯೂ ಕೂಡ ಸೀಮಿತ ಸಂಖ್ಯೆಯ ಆಸನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಸೂಚಿಸಿರುವ ಮಾರ್ಗಸೂಚಿಯನ್ವಯ ಪರ್ಯಾಯವನ್ನು ಸರಳವಾಗಿ ನಡೆಸಲಾಗುತ್ತದೆ ಎಂದರು.