ಉಡುಪಿ: ರಾಜ್ಯಾದ್ಯಂತ ಹಿಬಾಬ್ ಗಲಾಟೆ ತಾರಕಕ್ಕೆ ಏರುತ್ತಿರುವ ಸಂದರ್ಭ ನಾಲ್ಕು ಹಿಂದೂ ವಿದ್ಯಾರ್ಥಿನಿಯರು ಮುಸ್ಲಿಂ ವಿದ್ಯಾರ್ಥಿನಿಯ ಬೆಂಗಾವಲಾಗಿ ಕಾಲೇಜಿಗೆ ಕರೆದುಕೊಂಡು ಬಂದ ಘಟನೆ ಉಡುಪಿಯ ಮಹಿಳಾ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ನಡೆದಿದೆ.
ಹಿಜಾಬ್ ವಿವಾದದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಲು ಭಯ ಪಡುತ್ತಿದ್ದಾರೆ. ಈ ಸಂದರ್ಭ ಹಿಂದೂ ವಿದ್ಯಾರ್ಥಿನಿಯರು ಮುಸ್ಲಿಂ ವಿದ್ಯಾರ್ಥಿನಿಗೆ ಬೆಂಗಾವಲಾಗಿ ನಿಂತು ಜೊತೆಯಾಗಿ ಕಾಲೇಜಿಗೆ ಬರುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಜಿಲ್ಲೆಯ ಮಹಿಳಾ ಸರ್ಕಾರಿ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯರು ಸೌಹಾರ್ದ ಸಂದೇಶ ಸಾರಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೋಮು ಸಂಘರ್ಷ, ಹಿಂದೂ – ಮುಸ್ಲಿಂ ಧರ್ಮಗಳ ನಡುವೆ ಬಿರುಕುಗಳಿರಲಿಲ್ಲ. ಆದರೆ ಹಿಜಾಬ್ – ಕೇಸರಿ ಶಾಲು ವಿವಾದದ ನಂತರ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಹಿಜಾಬ್ ವಿವಾದ ಪ್ರಾರಂಭವಾದ ಜಿಲ್ಲೆಯಲ್ಲೇ ಇಂತಹ ಸೌಹಾರ್ದ ಸಂದೇಶ ಸಾರುವ ಘಟನೆ ನಡೆದಿರುವುದು ಖುಷಿಯ ವಿಚಾರ.