ಉಳ್ಳಾಲ: ಮುಸುಕುಧಾರಿ ತಂಡ ಮೀನಿನ ಟೆಂಪೋ ತಡೆದು 2ಲಕ್ಷ 15 ಸಾವಿರ ರೂ. ದೋಚಿ, ವ್ಯಾಪಾರಿ ಮೇಲೆ ಹಲ್ಲೆ ನಡೆಸಿದ ಘಟನೆ ಉಳ್ಳಾಲ ನೇತ್ರಾವತಿ ಸೇತುವೆ ಬಳಿಯ ಆಡಂಕುದ್ರು ಎಂಬಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಉಳ್ಳಾಲ ಮುಕ್ಕಚ್ಚೇರಿಯ ನಿವಾಸಿ ಮುಸ್ತಾಫ ಹಲ್ಲೆಗೆ ಒಳಗಾದ ವ್ಯಕ್ತಿ. ಅವರು ಎಂದಿನಂತೆ ಮಂಗಳೂರಿನ ದಕ್ಕೆಗೆ ತನ್ನ ಏಸ್ ಟೆಂಪೋದಲ್ಲಿ ಮೀನು ಖರೀದಿಸಲು ತೆರಳುತ್ತಿದ್ದರು. ರಿಟ್ಝ್ ಕಾರಿನಲ್ಲಿ ಬಂದ ತಂಡವೊಂದು ಟೆಂಪೋವನ್ನು ಹಿಂಬಾಲಿಸಿ ನೇತ್ರಾವತಿ ಸೇತುವೆ ಸಮೀಪ ಅಡ್ಡಗಟ್ಟಿದ್ದಾರೆ. ಬಳಿಕ ಕಾರಿನಲ್ಲಿದ್ದ ಮೂವರಲ್ಲಿ ಇಬ್ಬರು ಮುಸುಕುಧಾರಿಗಳು ಇಳಿದು ತಲವಾರಿನಿಂದ ದಾಳಿ ನಡೆಸಿ, ಅವರ ಬಳಿ ಇದ್ದ 2ಲಕ್ಷ 15 ಸಾವಿರ ರೂ. ದೋಚಿದ್ದಾರೆ.
ಮುಸ್ತಾಫ ಅವರನ್ನು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.