ಉಡುಪಿ: ಉಡುಪಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ನಗರಸಭೆ ಕಾರ್ಯಾಚರಣೆ ನಡೆಸಿದ್ದು, ಜಾಮೀಯ ಮಸೀದಿ ಎದುರಿದ್ದ ಅನಧಿಕೃತ (ಜಾರ ಮತ್ತು ಜೈತೂನ್ ಎರಡು ಹೊಟೇಲ್ ಗಳಿದ್ದ) ಕಟ್ಟಡ ತೆರವುಗೊಳಿಸಿದ್ದಾರೆ.


ತಹಶಿಲ್ದಾರ್ ಮತ್ತು ಪೌರಾಯುಕ್ತರು ಮೊಕ್ಕಾಂ, ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕಟ್ಟಡ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ತಿಂಗಳು ನಗರಸಭೆಯಲ್ಲಿ ಕಟ್ಟಡ ತೆರವು ಗೊಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಶಾಸಕ ರಘುಪತಿ ಭಟ್ ಆ ಸಭೆಯಲ್ಲಿ ಅನಧಿಕೃತ ಕಟ್ಟಡ ತೆರವು ಗೊಳಿಸುವ ಬಗ್ಗೆ ಸೂಚನೆಯನ್ನೂ ನೀಡಿದ್ದರು.
ಈ ಬಗ್ಗೆ ಪೌರಾಯುಕ್ತ ಡಾ.ಉದಯ ಶೆಟ್ಟಿ ಹೇಳಿಕೆ ನೀಡಿದ್ದು, ಇದೊಂದು ಅನಧಿಕೃತ ಕಟ್ಟಡವಾಗಿದ್ದು, ಈ ಕಟ್ಟಡಕ್ಕೆ ಯಾವುದೇ ಪರವಾನಗೆ ತೆಗೆದುಕೊಂಡಿಲ್ಲ. 2018ರಲ್ಲೇ ಈ ಕಟ್ಟಡವನ್ನು ತೆರವುಗೊಳಿಸಲು ಆದೇಶಿಸಲಾಗಿತ್ತು. ಅದರೆ ಈ ಕಟ್ಟಡ ನಿರ್ಮಿಸಿದವರು ಸ್ಟೇ ಒರ್ಡರ್ ತಂದಿದ್ದರು. ಇದೀಗ ಸ್ಟೇ ಒರ್ಡರ್ ತೆರವಾಗಿರುವ ಹಿನ್ನಲೆಯಲ್ಲಿ ನಗರಸಭಾ ವತಿಯಿಂದ ಕಟ್ಟಡವನ್ನು ತೆರವುಗೊಳಿಸಲು ಬಂದಾಗ ಸ್ವತಃ ಕಟ್ಟಡ ಮಾಲೀಕರೇ ತೆರವುಗೊಳಿಸುತ್ತಿದ್ದಾರೆ. ನಮ್ಮ ನಗರಸಭಾ ವ್ಯಾಪ್ತಿಯಲ್ಲಿ ಇದೊಂದೇ ಕಟ್ಟದ ಅನಧಿಕೃತವಾಗಿದ್ದು ಹೀಗಾಗಿ ಇದನ್ನು ತೆರವುಗೊಳಿಸಲಾಗಿದೆ ಎಂದರು.
ದ್ವೇಷ ರಾಜಕೀಯದಿಂದ ಕಟ್ಟಡ ತೆರವು
ಈ ಬಗ್ಗೆ ಹೋಟೆಲ್ ಮಾಲೀಕ ನಜೀರ್ ಪ್ರತಿಕ್ರಿಯೆ ನೀಡಿದ್ದು, ಹಿಜಾಬ್ ಪರವಾಗಿ ನಾನು ಪ್ರತಿಕ್ರಿಯೆ ನೀಡಿದ್ದೆ ಮತ್ತು ಎಸ್ಡಿಪಿಐ ಜಿಲ್ಲಾಧ್ಯಕ್ಷ ಆದ ಕಾರಣಕ್ಕಾಗಿ ದ್ವೇಷ ರಾಜಕೀಯ ಮಾಡಿದ್ದಾರೆ. ಹೀಗಾಗಿ ಈ ಕಟ್ಟಡವನ್ನು ತೆರವುಗೊಳಿಸಿದ್ದಾರೆ ಎಂದರು.