ಉಡುಪಿ: ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ರದ್ದು ಮಾಡಲಾಗಿದೆ. ಹಾಗೂ ರಾತ್ರಿಯ ಕರ್ಫ್ಯೂ ಮುಂದುವರೆಯಲಿದೆ. ಸಂಜೆ 7 ರ ನಂತರ ಬೀಚ್ ಗಳಿಗೆ ಹೋಗಲು ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಕೊರೋನಾ ಹಾಗೂ ಒಮಿಕ್ರಾನ್ ನಿಯಂತ್ರಣ ಮಾಡುವ ಎಲ್ಲಾ ನಿಯಮಗಳನ್ನು ಜಾರಿಗೊಳಿಸಿದೆ. ವಾರಾಂತ್ಯದ ಕರ್ಫ್ಯೂ ರದ್ದು ಮಾಡಲು ಆದೇಶ ಬಂದಿದ್ದು, ಅದನ್ನು ಪಾಲಿಸಲಾಗುತ್ತದೆ. ಮಲ್ಪೆ ಬೀಚ್ ಸೇರಿ ಹೆಚ್ಚು ಜನ ಸೇರುವಂತಹ ಬೀಚ್ ಗಳಿಗೆ ಸಾರ್ವಜನಿಕರ ಪ್ರವೇಶವನ್ನು ಸಂಜೆ 7 ರ ನಂತರ ನಿಷೇಧಿಸಲಾಗಿದೆ.
ಸರ್ಕಾರವು ಮದುವೆ, ಸಭೆ, ಸಮಾರಂಭಗಳಿಗೆ, ರಾಜಕೀಯ ಪಕ್ಷಗಳ ಸಮಾವೇಶ ಇವುಗಳಿಗೆ ವಿಧಿಸಿರುವ ನಿಯಮಗಳು ಮುಂದುವರೆಯುತ್ತದೆ. ಶಾಲಾ ಕಾಲೇಜುಗಳನ್ನು ಶನಿವಾರ ತೆರೆಯಬೇಕೊ ಬೇಡವೊ ಎನ್ನುವುದರ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದರೆ ಆ ತರಗತಿಯನ್ನು ಐದು ದಿನಗಳ ಕಾಲ ಬಂದ್ ಮಾಡಿ, ತರಗತಿಗಳನ್ನು ಸ್ಯಾನಿಟೈಜೇಶನ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ತಿಳಿಸಿದ್ದಾರೆ.