Tuesday, June 17, 2025

45 ವರ್ಷದಲ್ಲಿ ಕಾಂಗ್ರೆಸ್ ಮಾಡಿದ ಕಾಮಗಾರಿಗಳು ದುಡ್ಡಿಗಾಗಿಯೇ ಎಂದು ಪ್ರಶ್ನಿಸಿದ ಸಚಿವ ಅಂಗಾರ

ಸುಳ್ಯ: ತಾಲೂಕಿನ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡಿಕೊಂಡು ಜನರನ್ನು ದಿಕ್ಕುತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸಚಿವ ಎಸ್.ಅಂಗಾರ ಹೇಳಿದ್ದಾರೆ.
ಸುಳ್ಯದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಸುಳ್ಯ ನಗರದ ಶಾಂತಿನಗರದಲ್ಲಿ ನಿರ್ಮಾಣ ಹಂತದಲ್ಲಿರುವ ತಾಲೂಕು ಕ್ರೀಡಾಂಗಣದ ಬಗ್ಗೆ ಕಾಂಗ್ರೆಸ್ ನವರು ಆಧಾರ ರಹಿತವಾದ ಆರೋಪ ಮಾಡುತ್ತಿದ್ದು, ನಾನು ಯಾವುದೇ ಅಭಿವೃದ್ಧಿ ಕಾರ್ಯದಲ್ಲಿ ತಾರತಮ್ಯ ಮಾಡುತ್ತಿಲ್ಲ. ಕಾಂಗ್ರೆಸ್ಸಿಗರ ರಾಜಕೀಯ ಇವತ್ತು ನಿನ್ನೆಯದಲ್ಲ. ಅವರ ರಾಜಕೀಯ ಇತಿಹಾಸದಲ್ಲಿ ಅವರು ರಾಜಕೀಯವನ್ನೇ ಮಾಡಿದ್ದಾರೆ ಹೊರತು ಅಭಿವೃದ್ಧಿ ಕಡೆ ಗಮನ ನೀಡಿಲ್ಲ. ನನ್ನ ಮೇಲೆ ಆರೋಪಿಸಿ, ಅಭಿವೃದ್ಧಿಯ ವಿಷಯದಲ್ಲಿ ಹೊಟ್ಟೆಕಿಚ್ಚುಪಟ್ಟು ಕಾಂಗ್ರೆಸ್‌ನವರು ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದಿದ್ದಾರೆ.
ಕಳೆದ 45 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸರ್ಕಾರ ಇದ್ದ ಸಂದರ್ಭದಲ್ಲಿ ದೇಶ ಮತ್ತು ರಾಜ್ಯದಲ್ಲಿ ಅವರು ಮಾಡಿರುವ ಕಾಮಗಾರಿಗಳೆಲ್ಲಾ ದುಡ್ಡಿಗಾಗಿಯೇ ಎಂದು ಪ್ರಶ್ನಿಸಿದ ಸಚಿವರು, ತಾಲೂಕಿನ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಕಳೆದ ಆರು ಅವಧಿಯಲ್ಲಿಯೂ ಕೂಡ ಕೆಲಸ ನಿರ್ವಹಿಸಿದ್ದೇನೆ. 1996ರಲ್ಲಿ ಪಟ್ಟಣ ಪಂಚಾಯತಿ ಇದ್ದ ಸಂದರ್ಭದಲ್ಲಿ ಶಾಂತಿನಗರದ ಆ ಜಾಗವನ್ನು ಕ್ರೀಡಾಂಗಣಕ್ಕಾಗಿ ಮೀಸಲಿರಿಸಿ, 2006-07ರಲ್ಲಿ ಅಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಾಯಿತು. ಆ ಸಮಯದಲ್ಲಿ ಸರಕಾರದಿಂದ ಬರುವ ಅನುದಾನದಿಂದ ಅಭಿವೃದ್ಧಿ ಪಡಿಸುವ ಕೆಲಸ ಮಾಡಿದ್ದೇನೆ. ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಂದ ಮತ್ತು ಕ್ರೀಡಾ ಇಲಾಖೆಯಿಂದ ಸೂಕ್ತ ಸಲಹೆ ಸೂಚನೆ ಪಡೆದುಕೊಂಡು ಕ್ರೀಡಾಂಗಣ ನಿರ್ಮಾಣದ ಕೆಲಸ ನಡೆಸುತ್ತಾ ಬಂದಿದ್ದೇನೆ.
ಪ್ರಾರಂಭದಲ್ಲಿ 200ಮೀಟರ್‌ನ ಟ್ರ‍್ಯಾಕ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಕ್ರೀಡಾಪಟುಗಳ ಭವಿಷ್ಯದ ಹಿತದೃಷ್ಟಿಯಿಂದ ಅದನ್ನು ಮತ್ತಷ್ಟು ಏರಿಸಿ, 400 ಮೀಟರ್ ಟ್ರ‍್ಯಾಕ್ ನ ವಿಶಾಲ ಕ್ರೀಡಾಂಗಣ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ. ಪ್ರಾರಂಭದಲ್ಲಿ ಎರಡು ಮೂರು ಸಮಸ್ಯೆಗಳು ನಮಗೆ ಎದುರಾಗಿದೆ. ಅದನ್ನು ನಾನು ಇಲ್ಲ ಎಂದು ಹೇಳುವುದಿಲ್ಲ. ಇದರೊಂದಿಗೆ ಮಣ್ಣು ಹೆಚ್ಚಾಗಿರುವ ಕಾರಣ ಸ್ಥಳೀಯರಿಗೆ ಅದು ಕುಸಿಯಬಹುದೆಂಬ, ಆತಂಕವೂ ಬಂದಿರಬಹುದು. ಆದರೆ ಆ ರೀತಿಯ ಘಟನೆ ನಡೆಯಲು ನಾವು ಆಸ್ಪದ ಮಾಡಿಕೊಡುವುದಿಲ್ಲ.
ಈಗಾಗಲೇ ನಾವು ತೀರ್ಮಾನಿಸದಂತೆ ಮುಂದಿನ ಎರಡು ಮೂರು ದಿನಗಳಲ್ಲಿ ಪ್ಲಾಸ್ಟಿಕ್ ಟರ್ಪಲ್ ಹೊದಿಸಿ, ಮಣ್ಣು ಕುಸಿಯದಂತೆ ಕ್ರಮ ಕೈಗೊಳ್ಳುತ್ತೇವೆ, ಹಾಗೂ ಆ ಭಾಗದಲ್ಲಿ ನೀರು ಶೇಖರಣೆಗೊಳ್ಳದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ನಾನು ಕೂಡಾ ಕೂಲಿಕಾರ್ಮಿಕನಾಗಿ ದುಡಿದವನು. ಯಾವ ರೀತಿಯಲ್ಲಿ ಮಣ್ಣು ಕುಸಿಯಬಹುದೆಂಬ ತಿಳುವಳಿಕೆ ನನಗೂ ಇದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರವರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಅವರು ನನ್ನ ಮೇಲೆ ಮಾಡಿರುವ ಆರೋಪವನ್ನು ಮೊದಲು ಸಾಭೀತು ಮಾಡಲಿ. ನಮಗೆ ದುಡ್ಡು ಮಾಡುವುದೇ ಆದರೆ ದುಡ್ಡೇ ಮಾಡಬಹುದಿತ್ತು. ಅದು ಅಂಗಾರನ ಜಾಯಮಾನವಲ್ಲ. ಅಂಗಾರ ತನ್ನ ಬದುಕಿನಲ್ಲಿ ಹೇಗೆ ನಡೆದುಕೊಳ್ಳಬೇಕು ಹಾಗೂ ಹೇಗೆ ಅಭಿವೃದ್ಧಿ ಮಾಡಬೇಕೆಂಬ ಸ್ಪಷ್ಟತೆ ಇದೆ. ಆದರೆ ಅವರಿಗೆ ಸ್ಪಷ್ಟತೆ ಇಲ್ಲ. ಪಿ.ಸಿ. ಜಯರಾಮರು ಈ ಹಿಂದೆ ತಾ.ಪಂ. ಚುನಾವಣೆಯ ಸಂದರ್ಭದಲ್ಲಿ ಸೇವಾಜೆ – ಮಡಪ್ಪಾಡಿ ರಸ್ತೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಊರಿನ ಜನರಿಗೆ ರಸ್ತೆ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರು. ಆದರೆ ಅದು ಅವರಿಗೆ ಸಾಧ್ಯವಾಗಿಲ್ಲ. ಆದರೆ ಈಗ ತಾಲೂಕು ಕ್ರೀಡಾಂಗಣದ ಅಭಿವೃದ್ಧಿಯ ಸಂದರ್ಭದಲ್ಲಿ ಅಭಿವೃದ್ಧಿ ಕಾಮಗಾರಿಯ ವೇಗ ನೋಡಿ ಸಹಿಸಲು ಸಾಧ್ಯವಾಗದೇ, ಕಾಂಗ್ರೆಸ್ಸಿಗರು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರ.ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸುನಿಲ್ ಕೇರ್ಪಳ ಉಪಸ್ಥಿತರಿದ್ದರು.

Editorial Staff
Editorial Staff
ರಾಜ್ಯದ ವಾಸ್ತವಿಕ ಸಂಗತಿಗಳನ್ನು,ವಿಶೇಷ ಕುತೂಹಲಕಾರಿ ಮಾಹಿತಿ,ಲೇಖನಗಳನ್ನು ಲೋಕಕ್ಕೆ ನೀಡುವುದೇ ನಮ್ಮ ಉದ್ದೇಶ. ನೇರ,ನಿಷ್ಪಕ್ಷಪಾತ ಪತ್ರಿಕೋದ್ಯಮವೇ ನಮ್ಮ ಆದ್ಯತೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments

Stay Connected

2,500FansLike
1,333FollowersFollow
3,000SubscribersSubscribe

Latest Articles