ಸುಳ್ಯ: ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸುಳ್ಯ, ಸುದ್ದಿ ಮಾಧ್ಯಮ ಸುಳ್ಯ ಇದರ ಸಹಯೋಗದಲ್ಲಿ ವಿಶ್ವ ನೀರಿನ ದಿನಾಚರಣೆ ಸುಳ್ಯ ವಕೀಲರ ಸಂಘದ ಸಭಾಭವನದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ವಕೀಲರ ಸಂಘದ ಅಧ್ಯಕ್ಷ ಎಂ ವೆಂಕಪ್ಪಗೌಡ ವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಸೋಮಶೇಖರ.ಎ ನೀರು ಮನುಷ್ಯನಿಗೆ ಅತ್ಯಮೂಲ್ಯವಾದ ನಿಧಿಯಾಗಿದೆ. ಪರಿಸರ ರಕ್ಷಣೆಯೊಂದಿಗೆ ನೀರನ್ನು ರಕ್ಷಿಸಬೇಕಾಗಿದೆ. ಒಬ್ಬ ಮನುಷ್ಯನ ಜೀವನ ಆರೋಗ್ಯಯುತವಾಗಲು ನೀರು ಮಹತ್ವಪೂರ್ಣ ವಸ್ತು. ಜೀವಜಲ ರಕ್ಷಣೆಯ ಹೊಣೆ ನಮ್ಮೆಲ್ಲರ ಕರ್ತವ್ಯ ಎಂದರು.
ನಂತರ ಸುಳ್ಯದ ಕಿರಿಯ ಸಿವಿಲ್ ನ್ಯಾಯಾಧೀಶ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ ಯಶ್ವಂತ್ ಕುಮಾರ್ ಮಾತನಾಡಿ, ಸುಳ್ಯದ ಭಾಗದಲ್ಲಿ ಹರಿಯುತ್ತಿರುವ ಪಯಸ್ವಿನಿ ನದಿಯ ಕಳೆದ ಹತ್ತು ವರ್ಷಗಳ ಹಿಂದಿನ ನೀರಿನ ಮಟ್ಟಕ್ಕೂ ಪ್ರಸ್ತುತ ನೀರಿನ ಮಟ್ಟಕ್ಕೂ ಬಹಳ ವ್ಯತ್ಯಾಸವಿದೆ. ಈ ಭಾಗದ ಅರಣ್ಯ ನಾಶದಿಂದ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ನಾವೆಲ್ಲರೂ ಎಚ್ಚೆತ್ತುಕೊಂಡು ಪರಿಸರ ರಕ್ಷಣೆ, ನೀರಿನ ರಕ್ಷಣೆ ಮಾಡಿದರೆ ಮುಂದಿನ ಪೀಳಿಗೆಗೆ ವರದಾನವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಕೀಲ ರಾಮಚಂದ್ರ ಶ್ರೀಪಾದ ಹೆಗಡೆ, ಸುಳ್ಯ ನ್ಯಾಯಾಲಯದ ಎಪಿಪಿ ಜನಾರ್ಧನ್ ಬಿ, ಸುಳ್ಯ ತಾಲೂಕು ವಕೀಲರ ಸಂಘದ ಎಲ್ಲಾ ಸದಸ್ಯರು, ಸಾರ್ವಜನಿಕರು, ನ್ಯಾಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವಕೀಲರುಗಳಾದ ವಿನಯ ಮುಳುಗಾಡು ಸ್ವಾಗತಿಸಿ ಪ್ರತಿಭಾ ಶ್ಯಾಮ್ ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ಪುಷ್ಪರಾಜ್ ಗಾಂಭೀರ್ ವಂದಿಸಿದರು.